ಕಾನೂನಿನ ಉಲ್ಲಂಘನೆ ಆಗಿಲ್ಲ : ಸೆಂಟ್ರಲ್ ವಿಸ್ಟಾದಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಲಾಂಛನ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ: ಸೆಂಟ್ರಲ್ ವಿಸ್ಟಾದ ಮೇಲಿನ ಲಾಂಛನವನ್ನು ತಾವು ನೋಡಿದ್ದು, ಅದು ಭಾರತೀಯ ಲಾಂಛನ (ಅಸಮರ್ಪಕ ಬಳಕೆಯ ವಿರುದ್ಧದ ನಿಷೇಧ) ಕಾಯಿದೆಯನ್ನು ಉಲ್ಲಂಘಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ. ಆರ್‌. ಶಾ ಮತ್ತು ಕೃಷ್ಣ ಮುರಾರಿ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ರಾಷ್ಟ್ರ ಲಾಂಛನವಾಗಿ ಬಳಸುವ ನಾಲ್ಕು ಸಿಂಹಗಳ ಗುರುತನ್ನು ತಿರುಚಿ ‘ಕುಪಿತ, ಆಕ್ರಮಣಕಾರಿ ಸಿಂಹ’ಗಳ ರೀತಿಯಲ್ಲಿ ನಿರ್ಮಿಸಿರುವ ಲಾಂಛನದ ವಿನ್ಯಾಸವನ್ನು ನೂತನ ಸಂಸತ್‌ ಭವನದ ಮೇಲೆ ಅಳವಡಿಸುವ ಮೂಲಕ ಭಾರತೀಯ ಲಾಂಛನ (ಅಸಮರ್ಪಕ ಬಳಕೆಯ ವಿರುದ್ಧದ ನಿಷೇಧ) ಕಾಯಿದೆ ಉಲ್ಲಂಘಿಸಲಾಗಿದೆ ಎಂದು ಆಕ್ಷೇಪಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

ಲಾಂಛನ ಮೂಡಿಸುವ ಅಭಿಪ್ರಾಯವು ವ್ಯಕ್ತಿಯನ್ನು ಆಧರಿಸಿರುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಲಾಂಛನವು ಕಾಯಿದೆಗೆ ವಿರುದ್ಧವಾಗಿದೆ ಎಂದು ಹೇಳಲಾಗದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ನೂತನ ಲಾಂಛನದ ವಿನ್ಯಾಸದ ಬಗ್ಗೆ ಪ್ರಶ್ನಿಸಿ ವಕೀಲರಾದ ಅಲ್ದನೀಶ್‌ ರೈನ್‌ ಮತ್ತು ರಮೇಶಕುಮಾರ್‌ ಮಿಶ್ರಾ ಅರ್ಜಿ ಸಲ್ಲಿಸಿದ್ದರು. ಲಾಂಛನದಲ್ಲಿರುವ ಸಿಂಹಗಳು ಬಾಯ್ದೆರದು ಕೋರೆಹಲ್ಲುಗಳನ್ನು ಪ್ರದರ್ಶಿಸುವ ಮೂಲಕ “ಭೀತಿ ಸೃಷ್ಟಿಸುವಂತೆಯೂ, ಆಕ್ರಮಣಕಾರಿಯಾಗಿಯೂ” ಇವೆ. ಇದು ಸಾರನಾಥ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿರುವ “ಸೌಮ್ಯ ಹಾಗೂ ಗಾಂಭೀರ್ಯ”ದ ರಾಷ್ಟ್ರಲಾಂಛನಕ್ಕೆ ವ್ಯತಿರಿಕ್ತವಾಗಿದೆ ಎಂದು ಅವರು ಮನವಿಯಲ್ಲಿ ಆಕ್ಷೇಪಿಸಿದ್ದರು.
ಪ್ರಧಾನಿ ಮೋದಿ ಕೆಲ ವಾರಗಳ ಹಿಂದಷ್ಟೇ ನೂತನ ಸಂಸತ್‌ ಭವನದ ಮೇಲೆ ಈ ಲಾಂಛನವನ್ನು ಅನಾವರಣ ಮಾಡಿದ್ದರು. ಲಾಂಛನವನ್ನು ತಿರುಚಿರುವ ಬಗ್ಗೆ ವಿಪಕ್ಷಗಳು ಗಂಭೀರ ಆಪಾದನೆ ಮಾಡಿದ್ದವು. ಆದರೆ, ಕೇಂದ್ರ ಸರ್ಕಾರವು ವ್ಯಾಪಕ ಸಂಶೋಧನೆ ಮತ್ತು ಪ್ರಕ್ರಿಯಾ ವಿಧಾನಗಳ ನಂತರವೇ ಈ ಲಾಂಛನ ರೂಪಿಸಿರುವುದಾಗಿ ಸಮರ್ಥಿಸಿಕೊಂಡಿತ್ತು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐ ಆರ್ ದಾಖಲು

 

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement