ಜೈಪುರ: ವೃದ್ಧೆಯೊಬ್ಬರು ಧರಿಸಿದ್ದ ಬೆಳ್ಳಿಯ ಕಾಲುಂಗುರ ಕದಿಯಲು ಕಳ್ಳರು ಆಕೆಯ ಪಾದವನ್ನೇ ಕತ್ತರಿಸಿದ ಅಮಾನುಷ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಪಾದ ಕಳೆದುಕೊಂಡ 108 ವರ್ಷದ ಜಮುನಾ ದೇವಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಮುಂಜಾನೆ 5:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಆ ವೇಳೆ ಎಲ್ಲರೂ ಗಾಢ ನಿದ್ರೆಯಲ್ಲಿದ್ದರು ಎಂದು ಹೇಳಲಾಗಿದೆ. ಈ ಸಮಯಕ್ಕಾಗಿ ಹೊಂಚು ಹಾಕುತ್ತಿದ್ದ ಕಳ್ಳರು ವೃದ್ದೆಯನ್ನು ಮನೆಯಿಂದ ಹೊರಕ್ಕೆ ಎಳೆದೊಯ್ದು ಹರಿತವಾದ ಆಯುಧದಿಂದ ಪಾದಗಳನ್ನೇ ಕತ್ತರಿಸಿ ಕಾಲುಂಗುರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬೆಳಿಗ್ಗೆಯೇ ದೇವಸ್ಥಾನಕ್ಕೆ ಹೋಗಿದ್ದ ಮಗಳು ಮನೆಗೆ ಬಂದಾಗ ತಾಯಿ ಕಂಡಿಲ್ಲವೆಂದು ಹುಡುಕಿದಾಗ ಮನೆಯಿಂದ ಹೊರಗೆ ಅಜ್ಜಿ ಶತಾಯುಷಿ ವೃದ್ಧೆ ರಕ್ತಸ್ರಾವದಿಂದ ನರಳುತಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಹಿಳೆಯ ಕಾಲು ಕತ್ತರಿಸಲು ಬಳಸಿದ್ದ ಆಯುಧ ಸ್ಥಳದಲ್ಲೇ ಪತ್ತೆಯಾಗಿದ್ದು, ಫೋರೆನ್ಸಿಕ್ ತಜ್ಞರ ಸಹಾಯದಿಂದ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಕಳ್ಳರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ