ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಮಾರಾಟದಿಂದ ಇಂಧನ ಚಿಲ್ಲರೆ ಮಾರಾಟ ಸಂಸ್ಥೆಗಳಿಗೆ ಉಂಟಾಗಿರುವ ನಷ್ಟ ಸರಿದೂಗಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಸರ್ಕಾರಿ ಸ್ವಾಮ್ಯದ ಮೂರು ಕಂಪನಿಗಳಿಗೆ 22,000 ಕೋಟಿ ರೂ.ಗಳನ್ನು ಒಂದು ಸಲದ ಅನುದಾನವಾಗಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮೂರು ತೈಲ ಮಾರಾಟ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್)ಗೆ ಒಂದು ಬಾರಿಯ ಅನುದಾನ ನೀಡಲು ಅನುಮೋದನೆ ನೀಡಲಾಯಿತು ಎಂದು ತಿಳಿಸಿದ್ದಾರೆ.
ಜೂನ್ 2020ರಿಂದ ಜೂನ್ 2022ರ ವರೆಗೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಎಲ್ಪಿಜಿ ಸಿಲಿಂಡರ್ಗಳನ್ನು ಮಾರಾಟ ಮಾಡಿದ್ದರಿಂದ ಕಂಪನಿಗಳಿಗೆ ಉಂಟಾಗಿದೆ, ಅದನ್ನು ಸರಿದೂಗಿಸಲು ಈ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಜೂನ್ 2020 ರಿಂದ ಜೂನ್ 2022ರ ನಡುವಿನ ಅವಧಿಯಲ್ಲಿ ಅಂತಾರಾಷ್ಟ್ರೀಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಸುಮಾರು ಶೇ. 300ರಷ್ಟು ಏರಿಕೆ ಕಂಡಿದೆ. ಹೀಗಿದ್ದೂ ಗ್ರಾಹಕರ ಹಿತ ಕಪಾಡಲು ದರ ಹೆಚ್ಚಳವನ್ನು ದೇಶೀಯ ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ವರ್ಗಾಯಿಸಿರಲಿಲ್ಲ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಸುಮಾರು ಶೇ. 300ರಷ್ಟು ಏರಿಕೆ ಕಂಡರೂ ದೇಶೀಯ ಎಲ್ಪಿಜಿ ಬೆಲೆಗಳು ಕೇವಲ ಶೇ. 72ರಷ್ಟು ಮಾತ್ರ ಏರಿಕೆಯಾಗಿವೆ. ಇದರಿಂದ ಮೂರು ಸಂಸ್ಥೆಗಳಿಗೆ ಗಮನಾರ್ಹ ನಷ್ಟ ಉಂಟಾಗಿದೆ.
ಈ ನಷ್ಟಗಳ ಹೊರತಾಗಿಯೂ ಮೂರು ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಲ್ಲಿ ನಿರಂತರ ಎಲ್ಪಿಜಿ ಪೂರೈಕೆಯನ್ನು ಖಚಿತಪಡಿಸಿವೆ. ಆದ್ದರಿಂದ ಈ ನಷ್ಟಗಳಿಗೆ ಮೂರೂ ಸರಕಾರಿ ಸ್ವಾಮ್ಯದ ಕಂಪನಿಗಳಿಗೆ ಒಂದು ಬಾರಿಯ ಅನುದಾನ ಅನುದಾನವಾಗಿ 22,000 ಕೋಟಿ ರೂ. ಮೊತ್ತವನ್ನು ಸಚಿವ ಸಂಪುಟ ಅನುಮೋದಿಸಿದೆ. “ಈ ನಿರ್ಧಾರವು ಅಡೆತಡೆಯಿಲ್ಲದೆ ದೇಶದಲ್ಲಿ ಎಲ್ಪಿಜಿ ಪೂರೈಕೆಗಳನ್ನು ಖಾತ್ರಿಪಡಿಸಲು ಸಹಾಯ ಮಾಡಲಿದೆ,” ಎಂದು ಠಾಕೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ