ಮೈಸೂರು: ಕರ್ನಾಟಕ ಕಂಡ ಮುತ್ಸದ್ಧಿ ರಾಜಕಾರಣಿ, ದಲಿತ ಮುಖಂಡ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ದೀರ್ಘ ಕಾಲದ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಒಂದೂವರೆ ವರ್ಷಕ್ಕೆ ಸಂಸತ್ತಿನ ಅವಧಿ ಮುಕ್ತಾಯವಾಗಲಿದ್ದು, ಇದೇ ಸಂದರ್ಭದಲ್ಲಿ ನಿವೃತ್ತಿಯಾಗುವುದಾಗಿ ಅವರು ಪ್ರಕಟಿಸಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನಕ್ಕೆ 50 ವರ್ಷ ಆಗುತ್ತಿದೆ. ಇನ್ನು ಒಂದೂವರೆ ವರ್ಷಕ್ಕೆ ಸಂಸದ ಅವಧಿ ಮುಕ್ತಾಯವಾಗುತ್ತದೆ. ಈಗ ನನ್ನ ಆರೋಗ್ಯ ಸರಿಯಿಲ್ಲ. ಹಾಗಾಗಿ ಅಲ್ಲಿಗೆ ನಿವೃತ್ತಿ ಆಗುತ್ತೇನೆ. ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.
1977ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬಂದಿದ್ದೆ. ಈವರೆಗೆ 14 ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 11 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇನೆ. ಒಂದೂವರೆ ವರ್ಷ ಕಳೆದರೆ ನಾನು ರಾಜಕೀಯಕ್ಕೆ ಬಂದು 50 ವರ್ಷವಾಗಲಿದೆ. ಹಾಗಾಗಿ ರಾಜಕೀಯವಾಗಿ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ನನ್ನ ಮಕ್ಕಳು ರಾಜಕಾರಣಕ್ಕೆ ಬರುವುದಿಲ್ಲ
ಕಳೆದ ಲೋಕಸಭಾ ಚುನಾವಣೆಯಲ್ಲೇ ಸ್ಪರ್ಧಿಸುತ್ತಿರಲಿಲ್ಲ. ಆದರೆ ಕ್ಷೇತ್ರದ ಮತದಾರರು ಕಡೆಯ ಚುನಾವಣೆಯಲ್ಲಿ ಗೆದ್ದು ಅವಧಿ ಮುಗಿದ ಬಳಿಕ ನಿವೃತ್ತಿಯಾಗಿ ಎಂದು ಹೇಳಿದ್ದರು. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿದೆ. ಈಗ ನನ್ನ ಆರೋಗ್ಯ ಸರಿಯಿಲ್ಲ, ನನ್ನ ಲೋಕಸಭಾ ಸ್ಥಾನದ ಅವಧಿ ಮುಗಿದ ನಂತರ ರಾಜಕೀಯ ನಿವೃತ್ತಿಯ ಘೋಷಣೆ ಮಾಡಿದ್ದೇನೆ. ನನ್ನ ರಾಜಕೀಯ ನಿವೃತ್ತಿ ಬಳಿಕ ನನ್ನ ಮಕ್ಕಳು ರಾಜಕಾರಣಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ನ್ಯಾಷನಲ್ ಎಕ್ಸ್ಪೋಷರ್ ಸಿಕ್ಕಿದೆ. ಸಂಸತ್ತು ಜಗತ್ತಿನ ಪ್ರಜಾಪ್ರಭುತ್ವದ ಬಹುದೊಡ್ಡ ಕೇಂದ್ರ. ಸ್ಥಾಯಿ ಸಮಿತಿಗಳ ಮೂಲಕ ದೇಶದ ಪ್ರವಾಸ ಮಾಡಿದ್ದೇನೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮನವರಿಕೆ ಮಾಡಿಕೊಂಡಿದ್ದೇನೆ. ಜಾತಿಯತೆ, ಅಸ್ಪೃಶ್ಯತೆ ಹೇಗೆ ನಮ್ಮನ್ನು ಕೊಲ್ಲುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಸ್ಪೃಶ್ಯತೆ ಮಾನಸಿಕ ರೋಗ ಎಂದು ವಿ.ಶ್ರೀನಿವಾಸ್ ಪ್ರಸಾದ ಹೇಳಿದರು.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಗಜೇಂದ್ರ ಮೋಕ್ಷ ಸಿಕ್ಕಂತಾಗಿದೆ. 22 ವರ್ಷಗಳ ಸುದೀರ್ಘ ಅವಧಿಯ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಎಂದು ಶ್ರೀನಿವಾಸಪ್ರಸಾದ ಮಾರ್ಮಿಕವಾಗಿ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ