ಕಾಶ್ಮೀರದಲ್ಲಿ ಉಗ್ರರಿಂದ ವಲಸೆ ಕಾರ್ಮಿಕರ ಮೇಲೆ ಗ್ರೆನೇಡ್ ದಾಳಿ: ಇಬ್ಬರು ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ದಲ್ಲಿ ಉಗ್ರರು ಕೈಬಾಂಬ್ (ಗ್ರೆನೇಡ್) ಎಸೆದಿದ್ದರಿಂದ ಇಬ್ಬರು ವಲಸೆ ಕಾರ್ಮಿಕರು ಸಾವಿಗೀಡಾಗಿದ್ದಾರೆ.
ಮೃತರು ಉತ್ತರ ಪ್ರದೇಶದ ಕನೌಜ್ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಭಯೋತ್ಪಾದಕರು ಕಾಶ್ಮೀರಿ ಪಂಡಿತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಕೆಲವೇ ದಿನಗಳ ನಂತರ ಈ ಆಘಾತಕಾರಿ ಘಟನೆ ನಡೆದಿದೆ. ಶೋಪಿಯಾನ್​ನ ಹಾರ್ಮೆನ್ ಎಂಬಲ್ಲಿ ಭಯೋತ್ಪಾದಕರು ಕೈಬಾಂಬ್ ಎಸೆದಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡ ಉತ್ತರ ಪ್ರದೇಶದ ಕನೌಜ್ ನಿವಾಸಿಗಳಾದ ಮೊನೀಶಕುಮಾರ್ ಮತ್ತು ರಾಮಸಾಗರ್ ಎಂಬವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ ಎಂದು ಕಾಶ್ಮೀರದ ಪೊಲೀಸರು ಮಂಗಳವಾರ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪೋಸ್ಟ್ ಮಾಡಿರುವ ಜಮ್ಮು ಕಾಶ್ಮೀರ ಪೊಲೀಸರು, ಗ್ರೆನೇಡ್ ಎಸೆದ ಇಮ್ರಾನ್ ಬಶೀರ್ ಗನಿ ಎಂಬಾತನನ್ನು ಶೋಪಿಯಾನ್ ಪೊಲೀಸರು ಬಂಧಿಸಿದ್ದಾರೆ. ಈತ ನಿಷೇಧಿತ ಲಷ್ಕರ್ ಎ ತಯ್ಯಬಾ ಸಂಘಟನೆಗೆ ಸೇರಿದ್ದು, ತನಿಖೆ ಮುಂದುವರಿದಿದೆ’ ಎಂದು ಹೇಳಿದ್ದಾರೆ. ಬಾಂಬ್ ಸ್ಫೋಟಗೊಂಡಾಗ ಈ ಕಾರ್ಮಿಕರು ನಿದ್ರಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಈ ಜಿಲ್ಲೆಯ ಚೌಧರಿ ಗುಂಡ್ ಎಂಬಲ್ಲಿ ಇರುವ ತನ್ನ ಮನೆಯ ಸಮೀಪದಲ್ಲೇ ಪೂರನ್ ಕೃಷ್ಣ ಭಟ್ ಎಂಬ ಕಾಶ್ಮೀರಿ ಪಂಡಿತನ ಮೇಲೆ ಅಕ್ಟೋಬರ್‌ 15ರಂದು ಗುಂಡಿನ ದಾಳಿ ನಡೆದಿತ್ತು. ಶೋಪಿಯಾನ್​ನಲ್ಲಿ ವಾಸವಾಗಿದ್ದ ಅವರು ಕಾಶ್ಮೀರದಿಂದ ಹೊರಗೆ ಹೋದವರಲ್ಲ ಎಂದು ಸ್ಥಳೀಯರು ಹೇಳಿದ್ದರು.

ಪ್ರಮುಖ ಸುದ್ದಿ :-   ಪಾಕ್‌ ಸರ್ಕಾರದ ಮಾತನ್ನೇ ಕೇಳುತ್ತಿಲ್ಲ ಸೇನೆ...! ಭಾರತದ ಜೊತೆ ಕದನ ವಿರಾಮ ಒಪ್ಪಂದ ತಿರಸ್ಕರಿಸಿದ ಪಾಕಿಸ್ತಾನಿ ಸೇನೆ ; ಮತ್ತೆ ದಾಳಿ...!

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement