ಜೆಎಸ್ಎಸ್‌ನ ನೂತನ ಐಟಿಐ ಉದ್ಘಾಟನೆ : ಶೈಕ್ಷಣಿಕ ಹರಿಕಾರ ಡಾ. ನ. ವಜ್ರಕುಮಾರ ಹೆಸರು ನಾಮಕರಣ

ಧಾರವಾಡ : ಕೌಶಲ್ಯ ತರಬೇತಿಗಳಿಗೆ ಈಗ ಅಪಾರ ಬೇಡಿಕೆಯಿದೆ ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿಯುವ ಕಾರ್ಮಿಕ ವರ್ಗದವರನ್ನು ಇಂದು ಗುರುತಿಸುವ ಅಗತ್ಯವಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು. ಇಲ್ಲಿಯ ಮೃತ್ಯುಂಜಯ ನಗರದಲ್ಲಿ ಆರಂಭಗೊಂಡ ನೂತನ ಐ.ಟಿ.ಐ ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು, ನೂತನ ಐಟಿಐಗೆ ಡಾ. ವಜ್ರಕುಮಾರ ಕೈಗಾರಿಕಾ ತರಬೇತಿ ಸಂಸ್ಥೆ ಎಂದು ನಾಮಕರಣ ಮಾಡಿದರು ಹಾಗೂ ನ. ವಜ್ರಕುಮಾರ ಧಾರವಾಡದಲ್ಲಿ ಮಾಡಿದ ಶೈಕ್ಷಣಿಕ ಕ್ರಾಂತಿಯನ್ನು ನೆನಪಿಸಿಕೊಂಡರು.
ವಿದ್ಯಾರ್ಥಿಗಳಿಗೆ ಕೇವಲ ಕೌಶಲ್ಯವನ್ನು ಮಾತ್ರ ಕಲಿಸಿ ಯಂತ್ರಗಳನ್ನಾಗಿ ಮಾಡದೇ ಕೌಶಲ್ಯ ತರಬೇತಿಯೊಂದಿಗೆ ನೈತಿಕ ಹಾಗೂ ಮಾನವೀಯ ಶಿಕ್ಷಣ ಜೆ.ಎಸ್.ಎಸ್ ನೀಡುತ್ತ ಬಂದಿದೆ. ಆದ್ದರಿಂದ ಶೈಕ್ಷಣಿಕ ವಿಚಾರದಲ್ಲಿ ಜನತಾ ಶಿಕ್ಷಣ ಸಮಿತಿಯ ಸಮೂಹ ಶಿಕ್ಷಣ ಸಂಸ್ಥೆಗಳು ಶ್ರೇಷ್ಠಮಟ್ಟದಲ್ಲಿವೆ ಎಂದು ಅವರು ಹೇಳಿದರು.

ಈಗಿನ ದಿನಮಾನಗಳ ಕೈಗಾರಿಕೆಗಳಲ್ಲಿ ಅಗತ್ಯವಿರುವ ಕೌಶಲ್ಯಕ್ಕೆ ಅನುಗುಣವಾಗಿ ನಮ್ಮ ನೂತನ ಐಟಿಐನಲ್ಲಿ ಸಿವಿಲ್ ಇಂಜಿನಿಯರಿಂಗ್ ಅಸಿಸ್ಟಂಟ್, ಸೋಲಾರ್‌ ಟೆಕ್ನೋಲಾಜಿ, ಫ್ಯಾಶನ್ ಡಿಸೈನಿಂಗ್ ಟೆಕ್ನೋಲಾಜಿ, ಇಲೆಕ್ಟ್ರೀಶಿಯನ್ ಹಾಗೂ ಮೆಕ್ಯಾನಿಕ್ ಮೋಟಾರ ವೆಹಿಕಲ್ ವಿಭಾಗಗಳನ್ನು ತೆರೆಯಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಇವುಗಳಲ್ಲಿ ತರಬೇತಿ ಪಡೆದು ನೇರವಾಗಿ ಉದ್ಯೋಗ ಮಾಡಬಹುದು ಅಥವಾ ತಾವೇ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಜನತಾ ಶಿಕ್ಷಣ ಸಮಿತಿಯ ಕಾರ್ಯವೈಖರಿ ನೆನಪಿಸಿಕೊಂಡರು.ಶಿಸ್ತು, ಸಂಯಮ, ಸಮಯ ಪರಿಪಾಲನೆ, ಮಕ್ಕಳ ಮನಸ್ಸಿನಲ್ಲಿ ಬಿತ್ತುವ ನೈತಿಕ ಮೌಲ್ಯಗಳಿಂದಾಗಿ ಬಹಳಷ್ಟು ವಿದ್ಯಾರ್ಥಿಗಳು ಜೆ.ಎಸ್.ಎಸ್ ಸಂಸ್ಥೆಯಲ್ಲಿ ಪ್ರವೇಶ ಪಡೆಯಬೇಕೆಂದು ಬಯಸುತ್ತಾರೆ ಎಂದರು.
ಮುರುಘಾಮಠಕ್ಕೂ ಜೆ.ಎಸ್.ಎಸ್ ಸಂಸ್ಥೆಗೆ ಇರುವ ಅವಿನಾಭಾವ ಸಂಬಂಧವನ್ನು ಮಾರ್ಮಿಕವಾಗಿ ಹೇಳಿ ಈ ಭಾಗದ ವಿದ್ಯಾರ್ಥಿಗಳು ಐ.ಟಿ.ಐ ನ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಉದ್ಯೋಗ ಮತ್ತು ತರಬೇತಿ ಇಲಾಖೆ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರಾದ ಪಿ ರಮೇಶ್ಯ ಮಾತನಾಡಿ, ಜೆ.ಎಸ್.ಎಸ್ ಅಡಿಯಲ್ಲಿ ಈಗಾಗಲೇ ಎರಡು ಐ.ಟಿ.ಐ ಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಜೊತೆಗೆ ಉದ್ಯೋಗ ಕಲ್ಪಿಸುತ್ತಿದ್ದಾರೆ ಮತ್ತು ಪ್ರತಿವರ್ಷ ಉದ್ಯೋಗ ಮೇಳಗಳು ಹಾಗೂ ಕ್ಯಾಂಪಸ್ ಸಂದರ್ಶನಗಳನ್ನು ಏರ್ಪಡಿಸಿ ರಾಜ್ಯದ ಎಲ್ಲ ಐ.ಟಿ.ಐ ವಿದ್ಯಾರ್ಥಿಗಳಿಗೂ ಸಹ ಉದ್ಯೋಗ ದೊರಕಿಸಿಕೊಡುವ ಪ್ರಯತ್ನವನ್ನು ಮಾಡುತ್ತ ಬಂದಿದ್ದಾರೆ. ಈ ನೂತನ ಐ.ಟಿ.ಐ ಕೂಡ ಅದೆ ದಾರಿಯಲ್ಲಿ ಮುಂದುವರೆಯಲಿ ಎನ್ನುವುದು ನಮ್ಮೆಲ್ಲರ ಆಶಯ ಎಂದರು

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಈರೇಶ ಅಂಚಟಗೇರಿ ಮಾತನಾಡಿ ಬಡ ಹಾಗೂ ರೈತರ ಮಕ್ಕಳಿಗಾಗಿ ಈ ನೂತನ ಐ.ಟಿ.ಐ ಯನ್ನು ಸ್ಥಾಪಿಸುವುದು ಡಾ. ವಜ್ರಕುಮಾರವರ ಕನಸಾಗಿತ್ತು ಅದು ಈಗ ನನಸಾಗಿದೆ ಎಂದರು.
ಜೆ.ಎಸ್.ಎಸ್ ನ ಕಾರ್ಯದಶಿಗಳಾದ ಡಾ. ಅಜಿತ ಪ್ರಸಾದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳೆದ ೫೦ ವರ್ಷಗಳಿಂದ ದಿ. ಡಾ. ನ. ವಜ್ರಕುಮಾರರ ಅವಿರತ ಪ್ರಯತ್ನದಿಂದ ಜೆ.ಎಸ್.ಎಸ್ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಉತ್ತುಂಗದಲ್ಲಿದೆ. ಅವರು ಹಾಕಿಕೊಟ್ಟ ಭದ್ರಬುನಾದಿಯ ಮೇಲೆ ಜೆ.ಎಸ್.ಎಸ್ ನೆಲೆ ನಿಂತಿದೆ ಎಂದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು, ದೀಪಾ ಕುಲಕರ್ಣಿ ಪ್ರಾರ್ಥಿಸಿದರು. ಮಹಾವೀರ ಉಪಾದ್ಯೆ ವಂದಿಸಿದರು.
ವೇದಿಕೆಯಲ್ಲಿ ಕನಕೂರ ಗ್ರಾಮ ಪಂಚಾಯತ ಅಧ್ಯಕ್ಷರಾದ ರೇಣುಕಾ ಅರೇನ್ನವರ, ಆಡಳಿತ ಮಂಡಳಿ ಸದಸ್ಯರಾದ ಡಾ. ಎಂ.ಎನ್ ತಾವರಗೇರಿ, ಶ್ರೀಕಾಂತ ಕೆಮ್ತೂರ, ಕೇಶವ ದೇಸಾಯಿ, ಕಮಲ ಮೆಹತಾ, ಸುಧೀರ ಕುಸನಾಳೆ, ಎಸ್.ಡಿ.ಎಂ ನ ಕಾರ್ಯದರ್ಶಿಗಳಾದ ಜೀವಂಧರಕುಮಾರ, ಇತರರು ಉಸ್ಥಿತರಿದ್ದರು.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement