ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಡಾ ಅಜಿತ ಪ್ರಸಾದರಿಗೆ ಸನ್ಮಾನ

ಧಾರವಾಡ: ವಿದ್ಯಾಕಾಶಿ ಎಂದು ಕರೆಯಲ್ಪಡುವ ಧಾರವಾಡದ ಶೈಕ್ಷಣಿಕ ಬೆಳವಣಿಗೆಗೆ ಪ್ರೊ. ನ. ವಜ್ರಕುಮಾರ ಅವರ ಕೊಡುಗೆ ಅಪಾರ. ಅವರು ಧಾರವಾಡಕ್ಕೆ ಬರದೇ ಇದ್ದಿದ್ದರೆ ಧಾರವಾಡದ ಶೈಕ್ಷಣಿಕ ಕ್ಷೇತ್ರ ಬಡವಾಗುತ್ತಿತ್ತು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ಕರ್ನಾಟಕ ವಿದ್ಯಾ ವರ್ಧಕ ಸಂಘದ ವತಿಯಿಂದ ಡಾ.ಅಜಿತ ಪ್ರಸಾದ ಅವರನ್ನು ಸನ್ಮಾನಿಸು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಕಾರ್ಯವೈಖರಿ ನೆನಪಿಸಿಕೊಂಡರು. ವಜ್ರಕುಮಾರ ಅವರ ಒಡನಾಡಿಯಾಗಿ ಅಪಾರ ಅನುಭವ ಹೊಂದಿರುವ ಡಾ. ಅಜಿತ ಪ್ರಸಾದ ಅವರು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಯಾಗಿರುವುದು ಕ್ಷೇತ್ರದ ಪರಂಪರೆಯ ದ್ಯೋತಕವಾಗಿದ್ದು, ಧಾರವಾಡ ಶೈಕ್ಷಣಿಕ ಕ್ಷೇತ್ರ ಇನ್ನಷ್ಟು ಬೆರಗಾಗುವ ರೀತಿಯಲ್ಲಿ ಡಾ. ಅಜಿತ ಪ್ರಸಾದ ಅವರು ಕಾರ್ಯಪ್ರವೃತ್ತರಾಗಲಿ ಎಂದರು.

ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಜನತಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಹುಕ್ಕೇರಿಕರ ರಾಮರಾಯರು ಹಾಗೂ ವಜ್ರಕುಮಾರ ಸಂಸ್ಥೆಯ ಬೆಳವಣಿಗೆಗೆ ಪಟ್ಟ ಶ್ರಮದ ಜೊತೆಗೆ ಡಾ.ಅಜಿತ ಪ್ರಸಾದ ಅವರ ಶ್ರಮವೂ ಸೇರ್ಪಡೆಯಾಗಿ, ಸಂಸ್ಥೆ ಉತ್ತರೋತ್ತರವಾಗಿ ಬೆಳವಣಿಗೆ ಹೊಂದಲಿ ಎಂದು ಹಾರೈಸಿ ಅಜಿತ ಪ್ರಸಾದ ಅವರನ್ನು ಸನ್ಮಾನಿಸಿದರು.
ಸಂಘದ ಕಾರ್ಯಾಧ್ಯಕ್ಷರಾದ ಬಸವಪ್ರಭು ಹೊಸಕೇರಿ ಮಾತನಾಡಿ, ಜೆ.ಎಸ್.ಎಸ್ ಇಂದು ಶೈಕ್ಷಣಿಕವಾಗಿ ಇಡೀ ಉತ್ತರ ಕರ್ನಾಟಕದಲ್ಲಿಯೇ ಹೆಸರುವಾಸಿಯಾಗಿದೆ. ಎಲ್.ಕೆ.ಜಿ ಯಿಂದ ಪಿ.ಜಿ, ಪಿ.ಎಚ್.ಡಿ ವರೆಗೂ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿರುವುದು ಸಾಮಾನ್ಯವಾದ ಕಾರ್ಯವಲ್ಲ. ಇದರ ಕರ್ಣಧಾರತ್ವ ವಹಿಸಿರುವ ಅಜಿತ ಪ್ರಸಾದ ಅವರು ಇದರ ಕೀರ್ತಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಲಿ ಎಂದು ಹಾರೈಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿ ಶಂಕರ್ ಕುಂಬಿ ವಂದಿಸಿದರು, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ವೀರಣ್ಣ ಒಡ್ಡಿನ, ಗುರು-ಹಿರೇಮಠ, ಶಿವಾನಂದ ಭಾವಿಕಟ್ಟಿ, ಎನ್.ಎಸ್ ಕಾಶಪ್ಪನವರ, ಜಿನದತ್ ಹಡಗಲಿ, ಮಹಾವೀರ ಉಪಾದ್ಯೆ ಉಪಸ್ಥಿತರಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement