ಬೆಳಗಾವಿ: ಪಕ್ಷಕ್ಕೆ ಡ್ಯಾಮೇಜ್ ಆಗುವುದನ್ನು ತಡೆಯಲು ಹಿಂದೂ ಶಬ್ದದ ಕುರಿತಾದ ಹೇಳಿಕೆಯನ್ನು ವಾಪಸ್ ಪಡೆದಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರ, ರಾಜ್ಯದಲ್ಲಿ ನನ್ನ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನಾನು ಹೇಳಿದ ಮಾತನ್ನು ವಾಪಸ್ ಪಡೆಯಲು ಒತ್ತಡ ಇತ್ತು. ಬೇರೆ ಬೇರೆ ಕಾರಣದಿಂದ ಒತ್ತಡ ಇತ್ತು. ಹೀಗಾಗಿ ನನ್ನ ಹೇಳಿಕೆಯನ್ನು ವಾಪಸ್ ಪಡೆದಿರುವೆ. ಎಲ್ಲ ನಾಯಕರೊಂದಿಗೆ ಚರ್ಚೆ ನಡೆಸಿ ಹೇಳಿಕೆ ಹಿಂಪಡೆದು ವಿಷಾದ ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದರು.
ನೈಜ ಸುದ್ದಿ ಬಿಟ್ಟು ಬೇರೆ ಬೇರೆ ಚರ್ಚೆಗಳು ಆರಂಭವಾಯಿತು. ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಯಿತು. ಬೇರೆ ನಾಯಕರು ಸಮರ್ಥನೆ ಮಾಡುವ ಪ್ರಶ್ನೆ ಇಲ್ಲ. ಯಾಕೆಂದರೆ ಅದು ಖಾಸಗಿ ಕಾರ್ಯಕ್ರಮ, ಪಕ್ಷದ ಕಾರ್ಯಕ್ರಮ ಅಲ್ಲ. ಎಲ್ಲರೂ ಬೆಂಬಲಿಸುವ ನಿರೀಕ್ಷೆ ಇರಲಿಲ್ಲ. ಆದರೂ ಕೆಲವರು ಮಾತನಾಡಿದ್ದಾರೆ ಎಂದರು.
ಈಗಾಗಲೇ ಸಾಕಷ್ಟು ವಿವಾದ ಆಗಿದೆ. ಪಕ್ಷದ ತಿಳಿವಳಿಕೆಗೆ ನಾನು ಬೆಲೆ ಕೊಟ್ಟು ಹೇಳಿಕೆ ಹಿಂಪಡೆದಿದ್ದೇನೆ. ಆದರೆ ನನ್ನ ಮಾತಿಗೆ ಪುರಾವೆ ಕಂಡುಹಿಡಿಯುವ ಯತ್ನ ಮುಂದುವರೆಸುತ್ತೇನೆ. ಸ್ವಪಕ್ಷ, ವಿರೋಧ ಪಕ್ಷ ಹಾಗೂ ಮಾಧ್ಯಮಗಳ ಮುಂದೆ ಕೆಲ ಸಂಗತಿ ಹೇಳುತ್ತೇವೆ ಎಂದ ಅವರು, ನನಗೆ ಪಕ್ಷ ದೊಡ್ಡದು ಹೀಗಾಗಿ ಪಕ್ಷದ ಡ್ಯಾಮೇಜ್ ಆಗಬಾರದೆಂದು ಆ ಪದ ವಾಪಸ್ ಪಡೆದಿದ್ದೇನೆ. ಪ್ರತಿ ಗಂಟೆ ಲೆಕ್ಕದಲ್ಲಿ ಡ್ಯಾಮೇಜ್ ಆರಂಭ ಆಯ್ತು. ಹೀಗಾಗಿ ನಿನ್ನೆಯೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವೆ. ಮುಖ್ಯಮಂತ್ರಿಗಳು ನನ್ನ ಪತ್ರದ ತನಿಖೆ ಮಾಡಬೇಕು ಎಂದು ಜಾರಕಿಹೊಳಿ ಆಗ್ರಹಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ