ಹುಬ್ಬಳ್ಳಿ: ಯುವತಿಯನ್ನು ಮಾತನಾಡಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬನನ್ನು ಅಪಹರಣ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಾಲ್ವರು ಸೇರಿ ಆತನ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಕೇಶ್ವಾಪುರ ತಳವಾರ ಓಣಿಯ ಮಹಮ್ಮದ್ ಗೌಸ್, ಶಬರಿನಗರದ ಸೋಹೆಲ್ ಎಂಬವರನ್ನು ಬಂಧಿಸಲಾಗಿದ್ದು, ಪ್ರತೀಕ್ ಮತ್ತು ಸೌರಭ್ ಎಂಬವರು ಪರಾರಿಯಾಗಿದ್ದಾರೆ.
ಗೋಕುಲ ರಸ್ತೆ ಅಕ್ಷಯ ಪಾರ್ಕ್ನ ಖಾಸಗಿ ಕಾಲೇಜ್ನ ವಿದ್ಯಾರ್ಥಿ ಮಂಜುನಾಥ ಎಂಬ ವಿದ್ಯಾರ್ಥಿ ಓರ್ವ ಹುಡುಗಿಯ ಜೊತೆಗೆ ಸಲುಗೆಯಿಂದ ಮಾತನಾಡಿದ್ದ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ಜಗಳವಾಗಿತ್ತು. ನಂತರ ನಾಲ್ವರು ಸೇರಿಕೊಂಡು ಮಂಜುನಾಥನನ್ನು ಅಪಹರಿಸಿ ಕುಸುಗಲ್ಲ ರಸ್ತೆಯ ಮಿಡ್ ಮ್ಯಾಕ್ ಹಿಂದುಗಡೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಕಾಲೇಜಿನ ಪ್ರಾಂಶುಪಾಲರು ದೂರು ದಾಖಲಿಸಿದ ನಂತರ ಪೊಲೀಸರು ಅಪಹರಣಕ್ಕೊಳಗಾದ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ