ಮಕ್ಕಳ ಜೊತೆ ಅಸಭ್ಯ ವರ್ತನೆ : ಚಾಲಕನನ್ನು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ ಗ್ರಾಮಸ್ಥರು

ಚಿಕ್ಕಮಗಳೂರು: ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ತೋರಿಸಿ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಸಕ್ಕರಾಯಪಟ್ಟಣದಲ್ಲಿ ಈ ಘಟನೆ ನಡೆದ ವರದಿಯಾಗಿದ್ದು, ಆರೋಪಿ ರಾಜಪ್ಪ ವಿರುದ್ಧ ಚಿಕ್ಕಮಗಳೂರಿನ ಸಕ್ಕರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕಡೂರು ತಾಲೂಕಿನ ರಾಜಪ್ಪ ಎಂಬವರು ಕಡೂರಿನಿಂದ ಶಿಕ್ಷಕರನ್ನು ತನ್ನ ವ್ಯಾನಿನಲ್ಲಿ ಸಿದ್ದರಹಳ್ಳಿಗೆ ಕರೆದುಕೊಂಡು ಬಂದು ಸಂಜೆ ಮತ್ತೆ ಕರೆದೊಯ್ಯುತ್ತಿದ್ದರು. ಹೀಗೆ ಬೆಳಗ್ಗೆಯಿಂದ ಸಂಜೆವರೆಗೂ ಶಾಲೆ ಬಳಿಯೇ ಇರುತ್ತಿದ್ದ ರಾಜಪ್ಪ ಅಲ್ಲಿನ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಕುರಿತು ವಿದ್ಯಾರ್ಥಿನಿಯರು ಪೋಷಕರಿಗೆ ಮಾಹಿತಿ ನೀಡಿದ ನಂತರ ವಿಷಯ ಗ್ರಾಮಸ್ಥರಿಗೆ ಗೊತ್ತಾಗಿದೆ.
ಆಕ್ರೋಶಿತ ಗ್ರಾಮಸ್ಥರು ಆರೋಪಿ ರಾಜಪ್ಪನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎನ್ನಲಾಗಿದೆ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿ ರಾಜಪ್ಪನನ್ನು ವಶಕ್ಕೆ ಪಡೆದು ಪೋಕ್ಸೋ ಮತ್ತು ಇತರೆ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement