ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿವಿವಾದ ಉಲ್ಬಣಗೊಂಡಿದ್ದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಬೆಳಗಾವಿ-ಮಹಾರಾಷ್ಟ್ರ ನಡುವಿನ ಕೆಎಸ್ಆರ್ಟಿಸಿ ಬಸ್ ಸಂಚಾರ ಮತ್ತೆ ಆರಂಭವಾಗಿದೆ.
ಬೆಳಗಾವಿ-ಮಹಾರಾಷ್ಟ್ರ ನಡುವೆ ಬೆಳಗಾವಿಯಿಂದ 400ಕ್ಕೂ ಹೆಚ್ಚು ಬಸ್ ಸಂಚರಿಸುತ್ತಿದ್ದು, ರಾಜ್ಯದಿಂದ ಮಹಾರಾಷ್ಟ್ರದ ವಿವಿಧ ನಗರಗಳಿಗೆ ಬಸ್ ಸಂಚಾರ ಆರಂಭಗೊಂಡಿದೆ. ಬೆಳಗಾವಿ ಹಾಗೂ ಇತರ ಭಾಗಗಳಿಂದ ಮಹಾರಾಷ್ಟ್ರದ ಕೊಲ್ಲಾಪುರ, ನಾಸಿಕ, ಮುಂಬೈ, ಪುಣೆ ಮತ್ತಿತರ ನಗರಗಳಿಗೆ ಬಸ್ಗಳು ಸಂಚರಿಸುತ್ತಿದೆ.
ಚಿಕ್ಕೋಡಿಯಿಂದ ಪ್ರತಿದಿನ 200ಕ್ಕೂ ಹೆಚ್ಚು ಬಸ್ಗಳು ಮಹಾರಾಷ್ಟ್ರದ ವಿವಿಧ ನಗರ, ಪಟ್ಟಣಗಳಿಗೆ ತೆರಳುತ್ತಿದ್ದವು. ಈಗ 110 ಬಸ್ಗಳು ಮಾತ್ರ ಮಹಾರಾಷ್ಟ್ರಕ್ಕೆ ತೆರಳಿವೆ. ಕಾಗವಾಡ ಮಾರ್ಗ ಹಾಗೂ ನಿಪ್ಪಾಣಿ ಮಾರ್ಗವಾಗಿ ಬಸ್ಗಳು ಸಂಚರಿಸುತ್ತಿವೆ.
ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ಗಳಿಗೆ ಮಸಿ ಬಳಿದು ಪುಂಡಾಟಿಕೆ ಮೆರೆದಿದ್ದರಿಂದ ಎರಡು ದಿನಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್ಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಎರಡು ದಿನಗಳ ಬಳಿಕ ಮತ್ತೆ ಬಸ್ಗಳ ಸಂಚಾರ ಪುನಾರಂಭ ಮಾಡಲಾಗಿದ್ದು ಪರಿಸ್ಥಿತಿ ಅವಲೋಕಿಸಿ ಹಂತ-ಹಂತವಾಗಿ ಬಸ್ಗಳ ಸಂಚಾರ ಹೆಚ್ಚಿಸಲಾಗುತ್ತದೆ ಎನ್ನಲಾಗಿದೆ.
ಬೆಳಗಾವಿ ಗಡಿ ವಿವಾದ ತಾರಕಕ್ಕೇರಿದ ಪರಿಣಾಮ ಬುಧವಾರ ಬೆಳಗ್ಗೆಯಿಂದ ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ