ಬೆಂಗಳೂರು: ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ “ದೀವಟಿಗೆ ಸಲಾಂ” “ಸಲಾಂ ಆರತಿ” ಹಾಗೂ “ಸಲಾಂ ಮಂಗಳಾರತಿ” ಪೂಜಾಕಾರ್ಯಗಳ ಹೆಸರನ್ನು ಬದಲಾಯಿಸಿ ನಮ್ಮ ಸಂಪ್ರದಾಯದ ಹೆಸರನ್ನು ಇಡುವ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಗಿದೆ. ಈ ಪೂಜಾಕಾರ್ಯಗಳ ಹೆಸರನ್ನು ಮಾತ್ರ ಸ್ಥಳೀಯ ಭಾಷೆಯ ಪದಗಳಿಗೆ ಬದಲಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಧಾರ್ಮಿಕ , ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಕೆಲವು ದೇವಾಲಯಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ವೇಳೆ ದೀವಟಿಗೆ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿಯಂತೆ ನಡೆಸುವ ಕಾರ್ಯಕ್ಕೆ ದೀವಟಿಗೆ ಸಲಾಂ, ಸಲಾಂ ಮಂಗಳಾರತಿ ಮತ್ತು ಸಲಾಂ ಆರತಿ ಎಂದು ಕೆಲವು ದೇವಾಲಯಗಳಲ್ಲಿ ಕರೆಯಲಾಗುತ್ತಿದೆ. ಇದನ್ನ ಬದಲಾಯಿಸಬೇಕು ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒತ್ತಾಯ ಇರುವ ಬಗ್ಗೆ ಧಾರ್ಮಿಕ ಪರಿಷತ್ತಿನ ಸದಸ್ಯರು ಸಭೆಯ ಗಮನಕ್ಕೆ ತಂದರು. ಈ ಹಿನ್ನಲೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ಆಗಮ ಪಂಡಿತರ ಅಭಿಪ್ರಾಯದಂತೆ ದೇವಾಲಯಗಳಲ್ಲಿ ಇನ್ನು ಮುಂದೆ “ದೀವಟಿಗೆ ಸಲಾಂ” ಪದದ ಬದಲಿಗೆ “ದೀವಟಿಗೆ ನಮಸ್ಕಾರ”, “ಸಲಾಂ ಆರತಿ” ಬದಲಾಗಿ “ಆರತಿ ನಮಸ್ಕಾರ” ಹಾಗೂ ʼಸಲಾಂ ಮಂಗಳಾರತಿ” ಪದದ ಬದಲಿಗೆ “ಮಂಗಳಾರತಿ ನಮಸ್ಕಾರ” ಎಂದು ಹೆಸರು ಬದಲಾಯಿಸಿ, ಸೇವಾ ಕಾರ್ಯ ಮುಂದುವರೆಸಲು ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ. ಕೇವಲ ಬೇರೆ ಭಾಷೆಯ ಪದಗಳನ್ನು ಬದಲಾಯಿಸಿ, ನಮ್ಮ ಭಾಷೆಯ ಪದವನ್ನು ಅಳವಡಿಸಿ ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಮತ್ತು ಪೂಜೆಗಳನ್ನು ಮುಂದುವರೆಸಲಾಗುವುದು. ಪೂಜಾ ಕಾರ್ಯಗಳನ್ನು ರದ್ದುಪಡಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ