ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಶಿಕ್ಷಕರಿಗೆ 17 ಸೇವಾ ಸೌಲಭ್ಯ ಮಂಜೂರು ಮಾಡಿ : ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು: ಶಿಕ್ಷಕರಿಗೆ 17 ಸೇವಾ ಸೌಲಭ್ಯಗಳನ್ನು ಮಂಜೂರು ಮಾಡುವಾಗ ಕಡ್ಡಾಯವಾಗಿ ಆನ್ ಲೈನ್ ಮುಖಾಂತರವೇ ಪ್ರಸ್ತಾವನೆಗಳನ್ನು ಸ್ವೀಕರಿಸಿ ಇತ್ಯರ್ಥಪಡಿಸಬೇಕು. ಅದರ ಹೊರತಾಗಿ ಯಾವುದೇ ಕಾರಣಕ್ಕೂ ಭೌತಿಕವಾಗಿ ಪ್ರಸ್ತಾವನೆ ಸ್ವೀಕರಿಸದಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಂಡು, ಶಿಕ್ಷಕರಿಗೆ, ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ ನಿಯಮಾನುಸಾರ ನೀಡುವ 17 ಸೇವೆಗಳನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕವೇ ಸ್ವೀಕರಿಸಿ, ಆನ್ ಲೈನ್ ಮೂಲಕವೇ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದ್ದಾರೆ.

ಯಾವುದೇ ಕಾರಣಕ್ಕೂ ಭೌತಿಕ ಪ್ರಸ್ತಾವನೆಗಳನ್ನು ಸ್ವೀಕರಿಸಬಾರದು. ಈ ಬಗ್ಗೆ ಈಗಾಗಲೇ ಎಲ್ಲಾ ಬಟವಾಡೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೂ ಕೆಲವು ಜಿಲ್ಲೆಗಳಲ್ಲಿ ಭೌತಿಕ ಪ್ರಸ್ತಾನೆಗಳನ್ನು ಸ್ವೀಕರಿಸುತ್ತಿರುವ ಸಂದೇಹ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.ಭೌತಿಕ ಪ್ರಸ್ತಾವನೆ ಸ್ವೀಕರಿಸುವುದರಿಂದ ಶಿಕ್ಷಕರಿಗೆ ನಿಯಮಾನುಸಾರ ಮಂಜೂರು ಮಾಡಬೇಕಾದ ಸೌಲಭ್ಯಗಳನ್ನು ಕಾಲಮತಿಯೊಳಗೆ ಮಂಜೂರು ಮಾಡಲುಆಗದೆ ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಅಲ್ಲದೆ, ಈ ಸೇವಾ ಸೌಲಭ್ಯಗಳನ್ನು ಪಡೆಯಲು ಶಿಕ್ಷಕರು ಕಚೇರಿಗೆ ಬಂದಲ್ಲಿ ಬೋಧನಾ ಕಾರ್ಯಕ್ಕೂ ತೊಂದರೆಯಾಗುವ ಸಂಭವವಿದೆ.

ಪ್ರಮುಖ ಸುದ್ದಿ :-   ಮೇ 7ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ?

ಈ ಹಿನ್ನೆಲೆಯಲ್ಲಿ ಇಲಾಖೆಯ ಎಲ್ಲಾ ಬಟವಾಡೆ ಅಧಿಕಾರಿಗಳು ಶಿಕ್ಷಕರಿಗೆ ಸೇವಾ ಸೌಲಭ್ಯಗಳನ್ನು ಮಂಜೂರು ಮಾಡಲು ಆನ್ ಲೈನ್ ಮೂಲಕ ಪ್ರಸ್ತಾವನೆಗಳನ್ನು ಪಡೆಯಬೇಕು, ಅದನ್ನು ಆನ್‌ಲೈನ್‌ ಮೂಲಕ ಇತ್ಯರ್ಥ ಪಡಿಸಬೇಕು. ಹಾಗೂ ಮಂಜೂರಾತಿ ಆದೇಶ ನೀಡುವಾಗ ತಂತ್ರಾಂಶದಲ್ಲಿ ಪ್ರಸ್ತಾವನೆಯ ಕ್ರಮ ಸಂಖ್ಯೆಯನ್ನು ಮಂಜೂರಾತಿ ಆದೇಶ ಪತ್ರದಲ್ಲಿ ಕಡ್ಡಾಯವಾಗಿ ನಮೂದಿಸಿ, ಆದೇಶ ಪತ್ರ ನೀಡಬೇಕು ಎಂದು ಸೂಚಿಸಿದ್ದಾರೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement