ಅಥಣಿ : ಜೈನ ಸಮಾಜದಿಂದ ಸಮ್ಮೇದ ಶಿಖರ್ಜಿ ರಕ್ಷಿಸಿ ಬೃಹತ್ ಪ್ರತಿಭಟನೆ

ಅಥಣಿ : ಜಾರ್ಖಂಡ್ ರಾಜ್ಯದ ಜೈನರ ಪವಿತ್ರ ಕ್ಷೇತ್ರ ಸಮ್ಮೇದ ಶಿಖರ್ಜಿ ಕ್ಷೇತ್ರವನ್ನು ಪ್ರವಾಸ ತಾಣವನ್ನಾಗಿ ಮಾಡಿ ಅಧಿಸೂಚನೆ ಹೊರಡಿಸಿದ ಜಾರ್ಖಂಡ್ ಸರ್ಕಾರದ ನಡೆ ಖಂಡಿಸಿ ಅಥಣಿಯಲ್ಲಿ ಇಂದು, ಸೋಮವಾರ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಂತರ ರಾಷ್ಟ್ರಪತಿ, ಹಾಗೂ ಪ್ರಧಾನಿಗೆ ಅಥಣಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ನಗರದ ಮಹಾವೀರ ವೃತ್ತದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ನಂತರ ಬಸವೇಶ್ವರ ಸರ್ಕಲ್, ಮುರುಘೇಂದ್ರ ಸರ್ಕಲ್ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನೆ ನಡೆಸಲಾಯಿತು.
ಕೊಲ್ಲಾಪುರದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಭಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ ಶಿಖರ್ಜಿ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಮಾಡುವುದರಿಂದ ಅದರ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಲಿದೆ. ಬಾರ್, ರೆಸ್ಟೋರೆಂಟ್ ಗಳು ಕ್ಷೇತ್ರಕ್ಕೆ ಬರಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಣಯ ವಾಪಸ್ಸು ಪಡೆದು ಜೈನರ ಧಾರ್ಮಿಕ ಕ್ಷೇತ್ರದ ಪಾವಿತ್ರ್ಯವನ್ನು ರಕ್ಷಿಸಬೇಕು ಎಂದರು.
ಜೈನ ಧರ್ಮದ ತತ್ವವು ಬದುಕು ಬದುಕಲು ಬಿಡಿ ಎಂಬುದಾಗಿದ್ದು, ನಾವು ಯಾರ ವಿರುದ್ಧವೀ ಇಲ್ಲದೆ, ಶಾಂತಿ ಪ್ರಿಯರು. ನಮ್ಮ ಧರ್ಮದ ಧಕ್ಕೆ ಬಂದರೆ ಸಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರ, ಜಾರ್ಖಂಡ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನಾ ರ್‍ಯಾಲಿಯಲ್ಲಿ ಕೆ.ಎ. ವನಜೋಳ, ವಿದ್ಯಾಧರ ಡುಮ್ಮನ್ನವರ, ರಮೇಶ ಬಾಳೆಕಾಯಿ, ಬಾಹುಬಲಿ ಕಡೋಲಿ, ಅರುಣ ಯಲಗುದ್ರಿ, ಗುಂಡು ಇಜಾರೆ, ನಿತಿನ್‌ ಘೋಂಗಡಿ, ಆರ್. ಪಿ. ಹಗೇದ್, ಲೆನಿನ್ ಹಳಿಂಗಲಿ, ರಾಘವೇಂದ್ರ ಹಳಿಂಗಲಿ, ಪ್ರಫುಲ್ ಪಡನಾಡ, ಅಮರ ದುರ್ಗಣ್ಣವರ, ಪುಷ್ಪಕ ಪಾಟೀಲ, ಶಾಂತು ನಂದೇಶ್ವರ, ಮುತ್ತಣ್ಣ ಕಾತ್ರಾಳ, ರಾಜು ನಾಡಗೌಡ, ಅಶೋಕ ಪಡನಾಡ, ಲಕ್ಷ್ಮಣ ಬಣಜವಾಡ ಸೇರಿದಂತೆ ಹಲವು ಗ್ರಾಮಗಳ ಮಹಿಳಾ ಮಂಡಳಿಯ ಸದಸ್ಯರು, ಸೇವಾದಳದ ಕಾರ್ಯಕರ್ತರು, ಸಾವಿರಾರು ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.

ಪ್ರಮುಖ ಸುದ್ದಿ :-   ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದು ಬೆಳ್ಳಿ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement