ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಡಿಕ್ಕಿ ಹೊಡೆದು ಅಪಘಾತ; ದಕ್ಷಿಣ ಕನ್ನಡದ ಮೂವರು ಸಾವು

ಮಂಗಳೂರು: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡದ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಒಟೆಗೆ ಕಾರು ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿದ್ದು, ಅದರಲ್ಲಿ ಮೂವರು ದಕ್ಷಿಣ ಕನ್ನಡ ಮೂಲದವರು, ಮತ್ತೊಬ್ಬರು ಬಾಂಗ್ಲಾದೇಶದವರು ಎಂದು ವರದಿಗಳು ತಿಳಿಸಿವೆ. ನಾಲ್ವರು ಕಾರಿನಲ್ಲಿ ಹೋಗುತ್ತಿದ್ದಾಗ ಖುರೈಸ್ ರಸ್ತೆಯ ಬಳಿ ಒಂಟೆಗೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ದಕ್ಷಿಣ ಕನ್ನಡದ ಹಳೆಯಂಗಡಿ ಕದಿಕೆ ನಿವಾಸಿ ರಿಝ್ವಾನ್, ಸುರತ್ಕಲ್ ಕೃಷ್ಣಾಪುರದ ಶಿಹಾಬ್, ಮಂಗಳೂರು ಬೆಂಗರೆ ನಿವಾಸಿ ಅಕೀಲ್ ಹಾಗೂ ಬಾಂಗ್ಲಾದೇಶದ ಇನ್ನೋರ್ವ ಪ್ರಜೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದ ನಾಲ್ವರು ಕೂಡ SAQCO ಎಂಬ ಕಂಪನಿಯಲ್ಲಿ ನೌಕರರಾಗಿದ್ದರು ಹಾಗೂ ಕಂಪನಿಯಲ್ಲಿ ರಾತ್ರಿ ಕೆಲಸ ಮಾಡಲು ಹೋಗುತ್ತಿದ್ದರು ಎನ್ನಲಾಗಿದೆ. ಮೃತದೇಹಗಳನ್ನು ಸೌದಿಯ ಅಲ್ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಮಂಗಳೂರಿನ ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement