ಅಪ್ರಾಪ್ತಳ ಮೇಲೆ ಆಸಿಡ್‌ ದಾಳಿ: ಆರೋಪಿ ಬಂಧನ

ರಾಮನಗರ: ಜಿಲ್ಲೆಯ ಕನಕಪುರದ ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ಆಸಿಡ್‌ ದಾಳಿ ನಡೆಸಿದ 22 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಯುವತಿ ಪ್ರೀತಿ ನಿರಾಕರಿಸಿದ್ದರಿಂದ ಆರೋಪಿ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಆಸಿಡ್‌ ದಾಳಿಯಿಂದ ಯುವತಿಯ ಎಡ ಕಣ್ಣಿಗೆ ಗಂಭೀರ ಗಾಯಗೊಂಡಿದ್ದು, ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕನಕಪುರ ಬೈಪಾಸ್‌ ರಸ್ತೆ ಬಳಿ ಈ ದುರ್ಘಟನೆ ನಡೆದಿದೆ. ಶುಕ್ರವಾರ ಸಂಜೆ ಬೈಪಾಸ್‌ ರಸ್ತೆಯ ಸಮೀಪವಿರುವ ಕೆರೆಯ ಏರಿಯ ಬಳಿ ವಾಕಿಂಗ್‌ ಮಾಡುವಾಗ ಯುವಕ ಸುಮಂತ್‌ ಬಂದು ಅಡ್ಡಗಟ್ಟಿರುವುದಾಗಿ ತಿಳಿದು ಬಂದಿದೆ. ಈತನ ಪ್ರೀತಿಗೆ ಆಕೆ ಒಪ್ಪದೆ ಇದ್ದಾಗ ಕಾರು ಎಂಜಿನ್‌ ಶುಚಿಗೊಳಿಸಲು ಬಯಸುವ ರಾಸಾಯನಿಕ ಆಸಿಡ್‌ ಅನ್ನು ಈಕೆಯ ಮುಖಕ್ಕೆ ಹಾಕಿದ್ದಾನೆ ಎಂದು ವರದಿಯಾಗಿದೆ. ಪೊಲೀಸರು ಆರೋಪಿ ಸುಮಂತ್ (22)ನನ್ನು ಬಂಧಿಸಿದ್ದಾರೆ. ಈತ ಮೆಕಾನಿಕ್‌ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಆರೋಪಿ ವಿರುದ್ಧ ಸೆಕ್ಷನ್ 326 ಹಾಗೂ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಮನಗರ ಎಸ್ಪಿ ಕಾರ್ತಿಕ್‌ ರೆಡ್ಡಿ ತಿಳಿಸಿದ್ದಾರೆ.
ತನ್ನ ಪ್ರೀತಿಗೆ ಒಪ್ಪಿಗೆ ನೀಡುವಂತೆ ವಿದ್ಯಾರ್ಥಿನಿಯನ್ನು ಯುವಕ ಹಿಂದಿನಿಂದಲೂ ಕಿರುಕುಳ ನೀಡುತ್ತಿದ್ದ. ನಿನ್ನೆ ಸಂಜೆಯೂ ಪ್ರೀತಿ ಒಪ್ಪಿಕೊಳ್ಳುವಂತೆ ಒತ್ತಾಯ ಮಾಡಿದ್ದ. ಆದರೆ, ವಿದ್ಯಾರ್ಥಿನಿ ಒಪ್ಪದಿದ್ದಾಗ ರಾಸಾಯನಿಕ ದ್ರವ ಎರಚಿ ಪರಾರಿಯಾಗಿದ್ದ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement