ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಕಿಮ್ಸ್‌ ಆಸ್ಪತ್ರೆಯಲ್ಲಿ ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ ಯಶಸ್ವಿ

ಹುಬ್ಬಳ್ಳಿ : ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ನಡೆಸಿದ ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ ಯಶಸ್ವಿಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಈ ತರಹದ ಶಸ್ತ್ರಚಿಕಿತ್ಸೆ ನಡೆದಿದೆ ಎಂದು ಕಿಮ್ಸ್‌ ನಿರ್ದೇಶಕರಾದ ಡಾ.ರಾಮಲಿಂಗಪ್ಪ ಅಂತರಥಾನಿ ಹೇಳಿದ್ದಾರೆ.
ಇಂದು, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೇರೆ ರಾಜ್ಯ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ‌ ಕಸಿ ಮಾಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ತರಹದ ಕಿಡ್ನಿ ಕಸಿಯ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗಿದ್ದು, ಸಂಪೂರ್ಣವಾಗಿ ಯಶಸ್ವಿಯಾಗಿದೆ. ನಿರಂತರ 3 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದೆ. ಈಗ ರೋಗಿಯು ಆರೋಗ್ಯವಾಗಿದ್ದು, ಶಸ್ತ್ರ ಚಿಕಿತ್ಸೆಯಾದ 42 ಗಂಟೆಗಳಲ್ಲಿ ಸಾಮಾನ್ಯ ಜನರಂತೆ ಜೀವನ ನಡೆಸುತ್ತಿದ್ದಾರೆ. ಇತ್ತೀಚಿನ ವೈದ್ಯಕೀಯ ಬೆಳವಣಿಗೆಯಿಂದಾಗಿ ಈ ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವಾಗಿದೆ. 2.70 ಲಕ್ಷ ರೂ.ಗಳ ವೆಚ್ಚದಲ್ಲಿ ಈ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ. ಸಾಮಾನ್ಯವಾಗಿ ಈ ಚಿಕಿತ್ಸೆಗೆ 3.90 ಲಕ್ಷ ರೂ. ವೆಚ್ಚ ತಗಲುತ್ತದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಬಿಜೆಪಿ ಅಭ್ಯರ್ಥಿಗಳ 7ನೇ ಪಟ್ಟಿ ಪ್ರಕಟ : ಚಿತ್ರದುರ್ಗದಲ್ಲಿ ಹಾಲಿ ಸಂಸದರಿಗೆ ಕೊಕ್, ಯಡಿಯೂರಪ್ಪ ಆಪ್ತನಿಗೆ ಟಿಕೆಟ್‌

ಮೂತ್ರಪಿಂಡ ವಿಭಾಗದ ಮುಖ್ಯಸ್ಥರಾದ ಡಾ.ವೆಂಕಟೇಶ ಮೊಗೇರ, ಡಾ. ಮಲಗೌಡ ಪಾಟೀಲ, ಡಾ.ವಿವೇಕ ಗಾಣಿಗೇರ, ಮೂತ್ರ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರವಿರಾಜ ರಾಯ್ಕರ, ಡಾ. ಜೈದೀಪ ರಟಕಲ್, ಡಾ. ಮಂಜುಪ್ರಸಾದ ಜಿ.ಬಿ, ಡಾ.ಸಂಪತ್ತಕುಮಾರ ಎನ್.ಜಿ., ಡಾ. ಚೇತನ್ ಹೊಸಕಟ್ಟಿ, ಅರಿವಳಿಕೆ ವಿಭಾಗದ ಡಾ.ಮಾಧುರಿ ಕುರಡಿ, ಡಾ. ಶೀತಲ್ ಹಿರೇಗೌಡರ, ಡಾ. ರೂಪಾ, ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪುರುಷೋತ್ತಮ ರೆಡ್ಡಿ ಮತ್ತು ಶಿವಾನಂದ ಹೊನಕೇರಿ ಅವರನ್ನೊಳಗೊಂಡ ತಂಡ ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ ತಂಡದವರಿಗೆ ಅಭಿನಂದನೆಗಳು ಎಂದು ಹೇಳಿದರು.
ಮೂತ್ರಪಿಂಡ ವಿಭಾಗದ ಮುಖ್ಯಸ್ಥರಾದ ಡಾ.ವೆಂಕಟೇಶ ಮೊಗೇರ ಮಾತನಾಡಿ, ಶಸ್ತ್ರ ಚಿಕಿತ್ಸೆ ಪೂರ್ವದಲ್ಲಿ ರೋಗಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಯಿತು. ರೋಗಿ ಅಭಿಷೇಕ ಬೋಗಾರ್ ಅವರಿಗೆ ಅವರ ತಾಯಿ ಪದ್ಮಾವತಿ ಕಿಡ್ನಿ ನೀಡಿದ್ದಾರೆ. ಅಭಿಷೇಕ ಅವರ ರಕ್ತದ ಗುಂಪು ಎ ಪಾಸಿಟಿವ್ ಆಗಿತ್ತು, ಪದ್ಮಾವತಿ ಅವರು ಬಿ ಪಾಸಿಟಿವ್ ರಕ್ತದ ಗುಂಪು ಹೊಂದಿದ್ದರು. ಹೀಗಾಗಿ ಶಸ್ತ್ರಚಿಕಿತ್ಸೆಯು ತಂಡಕ್ಕೆ ಸವಾಲಾಗಿ ಪರಿಣಮಿಸಿತ್ತು ಎಂದು ತಿಳಿಸಿದರು.
ಕಿಮ್ಸ್ ವೈದ್ಯಕೀಯ ಅಧೀಕ್ಷಕರಾದ ಡಾ. ಅರುಣಕುಮಾರ, ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ ರೆಡ್ಡಿ, ಡಾ.ಚೇತನ ಹೊಸಕಟ್ಟಿ, ಶಿವಾನಂದ ಹೊನಕೇರಿ ಸೇರಿದಂತೆ ವೈದ್ಯರು, ಪ್ರಾಧ್ಯಾಪಕರು, ಸಿಬ್ಬಂದಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement