ಬಿಜೆಪಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ರಾಜೀನಾಮೆ ಪತ್ರ ವೈರಲ್, ಸ್ಪಷ್ಟನೆ ನೀಡಿದ ಶೆಟ್ಟರ್

ಹುಬ್ಬಳ್ಳಿ: ಕ್ಷೇತ್ರ ಬಿಟ್ಟುಕೊಡುವಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಅವರಿಗೆ ಬಿಜೆಪಿ ಹೈಕಮಾಂಡ್ ದೂರವಾಣಿ ಕರೆ ಮಾಡಿದ ಬೆನ್ನಲ್ಲೇ ಅವರ ಹೆಸರಿನಲ್ಲಿ ರಾಜೀನಾಮೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪತ್ರದ ಬಗ್ಗೆ ಸ್ಪಷ್ಟನೆ ನೀಡಿದ ಜಗದೀಶ ಶೆಟ್ಟರ್, ನನ್ನ ಹೆಸರಿನಲ್ಲಿ ವೈರಲ್ ಆಗುತ್ತಿರುವ ರಾಜೀನಾಮೆ ಪತ್ರ ನಕಲಿ ಎಂದು ಹೇಳಿದ್ದಾರೆ.
ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂಬುದು ಅಪ್ಪಟ ಸುಳ್ಳು. ನನ್ನ ಲೆಟರ್ ಹೆಡ್‌ ಹೆಸರಿನಲ್ಲಿ ಯಾರೋ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ ನಾನು ಯಾವುದೇ ಪತ್ರ ಬರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಡ್ಡಾ ಅವರಿಗೆ ಪತ್ರ ಬರೆಯುವುದಾದರೆ ಇಂಗ್ಲಿಷ್‌ನಲ್ಲಿ ಬರೆಯುತ್ತಾರೆ. ಆದರೆ ವೈರಲ್‌ ಆದ ಪತ್ರ ಕನ್ನಡದಲ್ಲಿ ಇದೆ. ಆಗಲೇ ಇದನ್ನು ನಕಲಿ ಎಂದು ಅರ್ಥಮಾಡಿಕೊಳ್ಳಬೇಕು.. ಮೊನ್ನೆ ನಕಲಿ ಅಭ್ಯರ್ಥಿಗಳ ಹೆಸರು ಹಾಕಿ ವೈರಲ್ ಮಾಡಿದ್ದರು. ಈಗ ನಕಲಿ ಪತ್ರ ವೈರಲ್ ಆಗಿದೆ, ಇದೆಲ್ಲ ಸುಳ್ಳು ಎಂದು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement