ವಿಧವಾ ವೇತನ ದುರ್ಬಳಕೆ: 80 ವರ್ಷದ ನಿವೃತ್ತ ಸರ್ಕಾರಿ ನೌಕರನಿಗೆ ಒಂದು ವರ್ಷ ಜೈಲು ಬದಲು ಒಂದು ದಿನ ಕೋರ್ಟ್‌ನಲ್ಲಿ ಕೂರುವ ಶಿಕ್ಷೆ

ಬೆಂಗಳೂರು: 36 ವರ್ಷಗಳ ಹಿಂದೆ ಸರ್ಕಾರಿ ನೌಕರನಾಗಿದ್ದಾಗ ಹಣ ದುರ್ಬಳಕೆಗೆ ವಿಧಿಸಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಹೈಕೋರ್ಟ್‌ ನ್ಯಾಯಾಮೂರ್ತಿಗಳು ವಯಸ್ಸನ್ನು ಗಣನೆಗೆ ತೆಗೆದುಕೊಂಡು ಮಾನವೀಯತೆ ಆಧಾರದಲ್ಲಿ ಕಲಾಪ ಮುಗಿಯುವ ತನಕ ಕೋರ್ಟ್‌ನಲ್ಲೇ ಇಡೀ ದಿನ ಕುಳಿತುಕೊಳ್ಳವ ಶಿಕ್ಷೆಯಾಗಿ ಪರಿವರ್ತಿಸಿದ್ದಾರೆ.
36 ವರ್ಷಗಳ ಹಿಂದೆ ಸರ್ಕಾರಿ ಉದ್ಯೋಗಿಯಾಗಿದ್ದಾಗ ವಿಧವಾ ವೇತನ ದುರ್ಬಳಕೆ ಮಾಡಿದ್ದ ಪ್ರಕರಣದಲ್ಲಿ 80 ವರ್ಷದ ವೃದ್ಧರೊಬ್ಬರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಒಂದು ದಿನಕ್ಕೆ ಇಳಿಸಿದೆ. ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಅಧೀನ ನ್ಯಾಯಾಲಯದ ಆದೇಶ ಎತ್ತಿಹಿಡಿಯಲಾಗಿದೆ. ಆದರೆ, ಆರೋಪಿಗೆ 80 ವರ್ಷ ಆಗಿರುವುದನ್ನು ಗಮನದಲ್ಲಿಟ್ಟುಕೊಂಡು ಮತ್ತು ದುರ್ಬಳಕೆ ಮಾಡಿಕೊಂಡಿದ್ದ ಹಣವನ್ನು 36 ವರ್ಷಗಳ ಹಿಂದೆಯೇ ಸರ್ಕಾರ ವಸೂಲಿ ಮಾಡಿರುವ ಅಂಶ ಪರಿಗಣಿಸಿ ಒಂದು ವರ್ಷದ ಜೈಲು ಶಿಕ್ಷೆಯನ್ನು ಒಂದು ದಿನಕ್ಕೆ ಕಡಿತಗೊಳಿಸಲಾಗಿದೆ. ಹಾಗೂ ನ್ಯಾಯಾಲಯದ ಕಲಾಪ ಆರಂಭವಾಗಿ ಮುಕ್ತಾಯಗೊಳ್ಳುವ ಅವಧಿಯವರೆಗೆ ವಿಧಿಸಲಾಗಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ಅಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ಮೈಸೂರು ಜಿಲ್ಲೆಯ ಕೆ.ಆರ್. ನಗರದ ನಿವಾಸಿ ಹನುಮಂತ ರಾವ್ ಎಂಬವರು ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ವಿಶ್ವಜೀತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.
ವರದಿ ಪ್ರಕಾರ, ಅರ್ಜಿದಾರರಿಗೆ 80 ವರ್ಷವಾಗಿದೆ. ಅಪರಾಧ ಕೃತ್ಯ 36 ವರ್ಷಗಳ ಹಿಂದೆ ನಡೆದಿದೆ. ಇದು ಅವರು ಎಸಗಿದ ಮೊದಲ ಅಪರಾಧ. ಈ ಎಲ್ಲಾ ಅಂಶ ಪರಿಗಣನೆಗೆ ತೆಗೆದುಕೊಂಡು ಶಿಕ್ಷೆ ಪ್ರಮಾಣವನ್ನು ಒಂದು ದಿನಕ್ಕೆ ಇಳಿಸಲಾಗುತ್ತಿದೆ. ಆದರೆ, ಎರಡೂ ಅಪರಾಧಗಳಿಗೆ ತಲಾ 10 ಸಾವಿರ ರೂಪಾಯಿ ದಂಡ ಪಾವತಿಸಬೇಕು. ತಪ್ಪಿದರೆ 3 ತಿಂಗಳ ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಪೀಠ ಆದೇಶಿಸಿದೆ.
ಅರ್ಜಿದಾರರ ಪರ ವಕೀಲ ಎಂ ಬಿ ಚಂದ್ರಚೂಡ ಅವರು “ಹನುಮಂತ ರಾವ್‌ ಅವರಿಗೆ ಸದ್ಯ 80 ವರ್ಷ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದುರ್ಬಳಕೆ ಮಾಡಿಕೊಂಡಿದ್ದ ಹಣವನ್ನು 1987ರಲ್ಲಿಯೇ ಸರ್ಕಾರವು ವಸೂಲಿ ಮಾಡಿದೆ. ರಾವ್‌ ಅವರು ಅಪರಾಧಿಕ ಹಿನ್ನೆಲೆ ಹೊಂದಿಲ್ಲ. ಆದ್ದರಿಂದ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು” ಎಂದು ಮನವಿ ಮಾಡಿದ್ದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೀತಿಯೇ ಸಿದ್ದು, ಪರಮೇಶ್ವರ ವೀಡಿಯೊ ಹೊರಬರಬಹುದು : ರಮೇಶ ಜಾರಕಿಹೊಳಿ

ಪ್ರಕರಣದ ಹಿನ್ನೆಲೆ: 1981ರ ನವೆಂಬರ್‌ 21ರಿಂದ 1987ರ ಜನವರಿ 5ರ ಅವಧಿಯಲ್ಲಿ ಹನುಮಂತ್ ರಾವ್, ಮಂಡ್ಯದ ಕೆ ಆರ್ ಪೇಟೆಯಲ್ಲಿ ರಾಜ್ಯ ಖಜಾನೆ ಇಲಾಖೆ ಅಧಿಕಾರಿಯಾಗಿದ್ದರು. ಈ ಅವಧಿಯಲ್ಲಿ ವಿಧವಾ ವೇತನ ಮಂಜೂರಾತಿಯಲ್ಲಿ 54,299 ರೂಪಾಯಿ ದುರ್ಬಳಕೆ ಮಾಡಿಕೊಂಡಿದ್ದು ಲೆಕ್ಕ ಪರಿಶೋಧನೆ ವೇಳೆ ಬಯಲಾಗಿತ್ತು. ಆ ಸಂಬಂಧ ಹುನುಮಂತ್ ರಾವ್‌ಗೆ ನೋಟಿಸ್ ಜಾರಿಗೊಳಿಸಿದ್ದ ಸರ್ಕಾರ, ದುರ್ಬಳಕೆ ಮಾಡಿಕೊಂಡ ಹಣವನ್ನು 1987ರ ಜನವರಿ 31ರ ಅಂತ್ಯದ ವೇಳೆಗೆ ಹಿಂದಿರುಗಿಸುವಂತೆ ಸೂಚಿಸಿತ್ತು. ನಂತರ ಆ ಮೊತ್ತವನ್ನು ರಾವ್ ವೇತನದಿಂದ ಕಡಿತ ಮಾಡಿತ್ತು.
ಅಂದಿನ ಮಂಡ್ಯ ಜಿಲ್ಲಾ ಖಜಾನೆ ಅಧಿಕಾರಿ ಸಿ ಎಸ್ ಮುತ್ತಣ್ಣ, ಸರ್ಕಾರಿ ಆಸ್ತಿಗೆ ಸಂಬಂಧಿಸಿದಂತೆ ನಂಬಿಕೆ ದ್ರೋಹ (ಐಪಿಸಿ ಸೆಕ್ಷನ್ 409) ಮತ್ತು ಸುಳ್ಳು ಲೆಕ್ಕ ಬರೆದ (ಐಪಿಸಿ ಸೆಕ್ಷನ್ 477ಎ) ಆರೋಪ ಸಂಬಂಧ ಕೆ ಆರ್ ಪೇಟೆ ಪೊಲೀಸ್ ಠಾಣೆಗೆ ಕ್ರಿಮಿನಲ್ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೆ ಆರ್ ಪೇಟೆ ಜೆಎಂಎಫ್‌ಸಿ ನ್ಯಾಯಾಲಯವು ಈ ಎರಡೂ ಅಪರಾಧಗಳಿಗೆ ತಲಾ ಒಂದು ವರ್ಷ ಶಿಕ್ಷೆ ಮತ್ತು 3 ಸಾವಿರ ರೂಪಾಯಿ ದಂಡ ವಿಧಿಸಿ 2009ರ ಏಪ್ರಿಲ್‌ 8ರಂದು ಆದೇಶಿಸಿತ್ತು. ಈ ಆದೇಶವನ್ನು ಮಂಡ್ಯದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಪುರಸ್ಕರಿಸಿತ್ತು. ಹೀಗಾಗಿ, ಹನುಮಂತ್ ರಾವ್ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಮುಖ ಸುದ್ದಿ :-   ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ಎಸ್‌ಐಟಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement