ಚಿಂಚೋಳಿ : ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ

ಕಲಬುರಗಿ: ಇಂದು (ಜೂನ್ 18) ಅಪ್ಪಂದಿರ ದಿನವೇ ತಂದೆ ಇಬ್ಬರು ಮಕ್ಕಳನ್ನು ಹಗ್ಗದಿಂದ ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿ ಗ್ರಾಮದಲ್ಲಿ ನಡೆದ ವರದಿಯಾಗಿದೆ. ಚಿಂಚೋಳಿ ತಾಲೂಕಿನ ಗಡಿ ಗ್ರಾಮ ಕುಂಚಾವರಂ ಬಳಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಕುಂಚಾವರಂ ಗ್ರಾಮದ ಹಣಮಂತ ಸಂಜಪ್ಪ ವಡ್ಡರ (40), ಮಗ ಓಂಕಾರ (9), ಮಗಳು ಅಕ್ಷರಾ (6) ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ.
ಕುಂಚಾವರಂ ನಿವಾಸಿಯಾಗಿದ್ದ ಹಣಮಂತ ತೆಲಂಗಾಣದ ತಾಂಡೂರಿನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಮನೆ ಕಟ್ಟಿಕೊಂಡು ನೆಲೆಸಿದ್ದ. ಇತ್ತೀಚಿಗೆ ಹೈದರಾಬಾದ್​ನಿಂದ ತನ್ನ ಮಕ್ಕಳೊಂದಿಗೆ ಸ್ವಗ್ರಾಮ ಕುಂಚಾವರಕ್ಕೆ ಬಂದಿದ್ದ ಹಣಮಂತ ಶುಕ್ರವಾರ ತನ್ನ ಸಹೋದರ ಹಾಗೂ ಗ್ರಾಪಂ ಸದಸ್ಯ ಗೋಪಾಲ ಅವರಿಗೆ ಕರೆ ಮಾಡಿ ಮಕ್ಕಳೊಂದಿಗೆ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನೀನು ನಮ್ಮೆಲ್ಲರ ಮೃತದೇಹಗಳನ್ನು ತೆಗೆದು ಅಂತ್ಯಕ್ರಿಯೆ ನಡೆಸಬೇಕು ಎಂದು ಕೋರಿಕೊಂಡಿದ್ದನಂತೆ.
ಗಾಬರಿಗೊಂಡ ಸಹೋದರ ಗೋಪಾಲ, ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾದರು ಹಾಗೂ ಅಗ್ನಿ ಶಾಮಕ ದಳದ ನೆರವಿನೊಂದಿಗೆ ಹಲವಾರು ಬಾವಿಗಳಲ್ಲಿ ಶೋಧ ನಡೆಸಿದ್ದಾರೆ. ಕೊನೆಗೆ ಕುಂಚಾವರಂ ಗ್ರಾಮದ ಬಳಿಯ ಪೋಚಾವರಂ ಗ್ರಾಮದ ತೋಟದ ಬಾವಿಯಲ್ಲಿ ಭಾನುವಾರ ಮೂವರ ಶವ ಪತ್ತೆಯಾಗಿದೆ.
ಸಾವಿಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕಾರ್ಯ ಮುಂದುವರಿಸಿದ್ದಾರೆ.

ಪ್ರಮುಖ ಸುದ್ದಿ :-   ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement