ಸ್ವರ್ಣವಲ್ಲೀ ಶ್ರೀಗಳ ಚಾತುರ್ಮಾಸ್ಯ ಜುಲೈ 3 ರಿಂದ ಆರಂಭ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ‌ ಸ್ವಾಮಿಗಳ 33ನೇ ಚಾತುರ್ಮಾಸ್ಯ ವ್ರತಾಚರಣೆ ಜುಲೈ 3 ರಿಂದ ಸೆಪ್ಟೆಂಬರ್ 29ರ ವರೆಗೆ ನಡೆಯಲಿದೆ.
ಶಿರಸಿ ನಗರದ ಯೋಗ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ತಿಳಿಸಿದ್ದಾರೆ. ಈ ಸಲ ಶ್ರಾವಣ‌ ಮಾಸ ಅಧಿಕ ಬಂದಿದ್ದರಿಂದ ಒಟ್ಟು 3 ತಿಂಗಳು ವ್ರತಾಚರಣೆ ನಡೆಯಲಿದೆ ಎಂದರು.
ಆಷಾಢ ಪೂರ್ಣಿಮೆಯಂದು ಬೆಳಗ್ಗೆ 10 ಕ್ಕೆ ಶ್ರೀಗಳು ಶ್ರೀವೇದ ವ್ಯಾಸ ಪೂಜೆ ನಡೆಸಿ‌ ವ್ರತ ಸಂಕಲ್ಪ‌ ಮಾಡಲಿದ್ದಾರೆ. ಚಾತುರ್ಮಾಸ್ಯದ ಅವಧಿಯಲ್ಲಿ ನಿತ್ಯವೂ ಒಂದೊಂದು ಸೀಮೆಯಿಂದ ಪಾದ ಪೂಜೆ‌ ನಡೆಯಲಿದೆ ಎಂದರು.
ಸ್ವರ್ಣವಲ್ಲೀ ಮಠದಲ್ಲೇ ವ್ರತ ಸಂಕಲ್ಪ
ಕಳೆದ 33 ವರ್ಷದಿಂದ ತಪೋ ಭೂಮಿಯಾದ ಸ್ವರ್ಣವಲ್ಲೀ ಮಠದಲ್ಲಿಯೇ ಶ್ರೀಗಂಗಾಧರೇಂದ್ರ ಸರಸ್ವತೀ ಶ್ರೀಗಳು ಚಾತುರ್ಮಾಸ್ಯ‌ ವ್ರತಾಚರಣೆ ನಡೆಯುತ್ತಿದೆ. ಈ ಅವಧಿಯಲ್ಲಿ ಶಿಷ್ಯರು‌ ಮಠಕ್ಕೆ ಆಗಮಿಸಿ ಗುರು ಸೇವೆ‌ ನಡೆಸಲಿದ್ದಾರೆ. ವ್ರತ ಸಂಕಲ್ಪ ದಿನ ಋಗ್ವೇದ, ಕೃಷ್ಣಜುರ್ವೇದ, 18 ಪುರಾಣ ಪಾರಾಯಣಗಳು ನಡೆಯಲಿದೆ. ಜುಲೈ ೧೦ರಿಂದ ೨೪ರ ತನಕ ಶ್ರೀಗಳಿಂದ ಕಾಷ್ಠ ಮೌನ ಇದ್ದು, ಅಂದಿನ ದಿನದಲ್ಲಿ ಶ್ರೀ ದರ್ಶನ ಇಲ್ಲವಾಗಿದೆ‌ ಎಂದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣಗೆ ನಾವು ಅನುಮತಿ ನೀಡಿಲ್ಲ ; ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ತೆರಳಿದ್ದಾರೆ : ವಿದೇಶಾಂಗ ಸಚಿವಾಲಯ

ಸಾಧಕರಿಗೆ‌ ಸಮ್ಮಾನ
ಶ್ರೀಗಳ ಚಾತುರ್ಮಾಸ್ಯ ಆರಂಭದ‌ ಹಿನ್ನಲೆಯಲ್ಲಿ ಜು.3ರಂದು ಸಂಜೆ 4ಕ್ಕೆ ಸಭಾ‌ ಕಾರ್ಯಕ್ರಮ ನಡೆಯಲಿದೆ ಅತಿಥಿಗಳಾಗಿ ಶಾಸಕ ಶಿವರಾಮ ಹೆಬ್ಬಾರ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಅಶೋಕ ಹಾರ್ನಳ್ಳಿ ಪಾಲ್ಗೊಳ್ಳುವರು. ನಾಡಿನ ಖ್ಯಾತ ವೈದ್ಯ ದಾವಣಗೆರೆಯ ಡಾ. ಎಸ್.ಆರ್.ಹೆಗಡೆ, ವಾತುಲಾಗಮ ವಿದ್ವಾಂಸ ವೇದಮೂರ್ತಿ ಗಜಾನನ ಹಿರೇ ಭಟ್ಟ ಗೋಕರ್ಣ, ರಘುಪತಿ ಎನ್.ಭಟ್ಟ ಸುಗಾವಿ, ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರನ್ನು ಶ್ರೀಗಳು ಗೌರವಿಸಲಿದ್ದಾರೆ. ಶ್ರೀಗಳು ಬರೆದ ಲೇಖನಗಳ ಸಂಕಲನ ಗುರುವಾಣಿ ಕೃತಿ ಬಿಡುಗಡೆ ಕೂಡ ಆಗಲಿದೆ ಎಂದರು.
ಚಾತುರ್ಮಾಸ್ಯ ಅವಧಿಯಲ್ಲಿ ಸ್ವಸಹಾಯ ಸಂಘಗಳ‌ ಸಮಾವೇಶ, ಯಕ್ಷ ಶಾಲ್ಮಲಾ‌ ಸಂಸ್ಥೆಯಿಂದ ಮಕ್ಕಳ‌ ತಾಳಮದ್ದಲೆ ಸ್ಪರ್ಧೆ, ಸನ್ಮಾನ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಪ್ರಮುಖರಾದ ಆರ್.ಎಸ್.ಹೆಗಡೆ ಭೈರುಂಬೆ, ಕೆ.ವಿ.ಭಟ್ಟ, ಎಸ್.ಎನ್.ಭಟ್‌ ಉಪಾಧ್ಯ ಇತರರು ಇದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement