ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟಿ.ಎಸ್. ಸಿಂಗ್ ದೇವ ಅವರನ್ನು ಛತ್ತೀಸ್ಗಢ ಉಪ ಮುಖ್ಯಮಂತ್ರಿಯಾಗಿ ಬುಧವಾರ ನೇಮಕ ಮಾಡಿದ್ದಾರೆ. ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಮುಂಬರುವ ಛತ್ತೀಸ್ಗಢ ವಿಧಾನಸಭಾ ಚುನಾವಣೆಯ ಕುರಿತು ಚರ್ಚಿಸಲು ನಡೆದ ಪರಿಶೀಲನಾ ಸಭೆಯಲ್ಲಿ ಸಿಂಗ್ ದೇವ ಅವರ ನೇಮಕವನ್ನು ಘೋಷಿಸಲಾಯಿತು.
ಸಿಂಗ್ ದೇವ ಅವರ ನೇಮಕಾತಿಗೆ ಭೂಪೇಶ ಬಘೇಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ ತಮ್ಮಿಬ್ಬರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸಿಂಗ್ ದೇವ್ ಅವರ ನೇಮಕವನ್ನು ಪ್ರಕಟಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, “ಅವರು ಕಾಂಗ್ರೆಸ್ ನಿಷ್ಠಾವಂತ ನಾಯಕ ಮತ್ತು ಸಮರ್ಥ ಆಡಳಿತಗಾರರಾಗಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಅವರ ಸೇವೆಯಿಂದ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ” ಎಂದು ಹೇಳಿದ್ದಾರೆ.
15 ವರ್ಷಗಳ ನಂತರ 2018ರಲ್ಲಿ ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದಾಗ, ಮುಖ್ಯಮಂತ್ರಿ ಕುರ್ಚಿಗಾಗಿ ಭೂಪೇಶ್ ಬಘೇಲ್ ಮತ್ತು ಟಿಎಸ್ ಸಿಂಗ್ ದೇವ್ ನಡುವೆ ಸಂಘರ್ಷ ಪ್ರಾರಂಭವಾಯಿತು. ನಂತರ ಎರಡೂವರೆ ವರ್ಷಕ್ಕೆ ಬಘೇಲ್ ಅವರಿಗೆ ಮತ್ತು ಉಳಿದ ಅರ್ಧಕ್ಕೆ ದೇವ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನಿಗದಿಪಡಿಸಲು ನಿರ್ಧರಿಸಲಾಯಿತು.
ಆದಾಗ್ಯೂ, ಸೂತ್ರ ಈವರೆಗೆ ಕಾರ್ಯಗತಗೊಂಡಿಲ್ಲ ಮತ್ತು ದೇವ್ ಅವರನ್ನು ಮೂಲೆಗುಂಪು ಮಾಡಲು ಹಲವಾರು ಪ್ರಯತ್ನಗಳನ್ನು ಮಾಡಲಾಯಿತು. ಅಂದಿನಿಂದ ಸಿಂಗ್ ದೇವ್ ಮತ್ತು ಸಿಎಂ ಭೂಪೇಶ್ ಬಘೇಲ್ ನಡುವೆ ರಾಜಕೀಯ ಮೇಲಾಟ ನಡೆದಿದೆ.
ಈ ವರ್ಷದ ಏಪ್ರಿಲ್ನಲ್ಲಿ, “ಮಾಧ್ಯಮಗಳು ‘2.5-2.5 ವರ್ಷಗಳ ಮುಖ್ಯಮಂತ್ರಿ’ (2.5 ವರ್ಷಗಳ ಬಾಘೇಲ್ ಮತ್ತು 2.5 ವರ್ಷಗಳ ದೇವ್) ಸೂತ್ರದ ಬಗ್ಗೆ ಪದೇ ಪದೇ ಕೇಳುತ್ತಿವೆ. ಅದು ಸಂಭವಿಸದಿದ್ದಾಗ ಅದು ನೋವುಂಟುಮಾಡುತ್ತದೆ” ಎಂದು ಸಿಂಗ್ ದೇವ್ ಹೇಳಿದ್ದರು.
ರಾಜ್ಯದ ವಿಧಾನಸಭೆಯ ಎಲ್ಲಾ 90 ಸದಸ್ಯರನ್ನು ಆಯ್ಕೆ ಮಾಡಲು ಛತ್ತೀಸ್ಗಢ ವಿಧಾನಸಭಾ ಚುನಾವಣೆಯು ಈ ವರ್ಷದ ನವೆಂಬರ್ನಲ್ಲಿ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ