ನವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೇರಿದಂತೆ ರಾಜ್ಯಸಭೆಯ 10 ಸದಸ್ಯರು ಜುಲೈ, ಆಗಸ್ಟ್ನಲ್ಲಿ ನಿವೃತ್ತಿಯಾಗಲಿದ್ದಾರೆ. ಆ ಸ್ಥಾನಗಳಿಗೆ ಜುಲೈ 24ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ.
ಗೋವಾದಿಂದ ಒಬ್ಬರು, ಗುಜರಾತ್ನಿಂದ ಮೂವರು, ಪಶ್ಚಿಮ ಬಂಗಾಳದಿಂದ ಆರು ಸದಸ್ಯರು ನಿವೃತ್ತಿಯಾಗುತ್ತಿದ್ದು, ಈ ಆಯ್ಕೆಗೆ ಚುನಾವಣೆ ನಡೆಯಲಿದೆ. ಮಂಗಳವಾರ ಈ ಬಗ್ಗೆ ಘೋಷಣೆ ಮಾಡಿದ ಚುನಾವಣಾ ಆಯೋಗ, ಅದೇ ದಿನ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದೆ. ಜುಲೈ 13 ರೊಳಗೆ ನಾಮಪತ್ರ ಸಲ್ಲಿಸಬೇಕು.
ಗುಜರಾತ್ನಿಂದ ವಿದೇಶಾಂಗ ಸಚಿವರಾದ ಬಿಜೆಪಿಯ ಜೈಶಂಕರ, ದಿನೇಶಚಂದ್ರ ಜೆಮಲ್ಭಾಯ್ ಅನವದೀಯ, ಲೋಖಂಡವಾಲಾ ಜುಗಲ್ ಸಿನ್ಹಾ ಮಾಥುರಜಿ ಹಾಗೂ ಪಶ್ಚಿಮ ಬಂಗಾಳದಿಂದ ಆಯ್ಕೆಯಾಗಿದ್ದ ತೃಣಮೂಲ ಕಾಂಗ್ರೆಸ್ನ ಡೆರ್ರೆಕ್ ಒ ಬ್ರಿಯಾನ್, ಡೊಲಾ ಸೇನ್, ಪ್ರದೀಪ ಭಟ್ಟಾಚಾರ್ಯ, ಸುಶ್ಮಿತಾ ದೇವ್, ಸುಖೇಂದು ಶೇಖರ ರೇ, ಶಾಂತಾ ಛೆಟ್ರಿ ಅವರ ಅವಧಿ ಆಗಸ್ಟ್ 18ಕ್ಕೆ ಮುಕ್ತಾಯವಾಗಲಿದೆ. ಗೋವಾದಿಂದ ಆಯ್ಕೆಯಾಗಿರುವ ಬಿಜೆಪಿ ವಿನಯ ಡಿ. ತೆಂಡೂಲ್ಕರ್ ಅವರ ಅವಧಿಯು ಜುಲೈ 28ಕ್ಕೆ ಅಂತ್ಯವಾಗಲಿದೆ. ಅಲ್ಲದೆ, ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಒಂದು ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಸುವುದಾಗಿ ಘೋಷಿಸಿತು. ಗೋವಾದ ಮಾಜಿ ಮುಖ್ಯಮಂತ್ರಿ ಲುಜಿನ್ಹೋ ಫಲೈರೊ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತೃಣಮೂಲ ಕಾಂಗ್ರೆಸ್ ತೊರೆದ ನಂತರ ಈ ಸ್ಥಾನ ತೆರವಾಗಿತ್ತು. ಅವರ ರಾಜ್ಯಸಭಾ ಅವಧಿ ಏಪ್ರಿಲ್ 2026ರವರೆಗೂ ಇತ್ತು.
ಜುಲೈ 6ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರಗಳ ಸಲ್ಲಿಕೆಗೆ ಜುಲೈ 13 ಕಡೆಯ ದಿನವಾಗಿದ್ದು, ವಾಪಸಾತಿಗೆ ಜುಲೈ 17 ಕಡೆಯದಿನ. ಮತದಾನ ಜುಲೈ 24ರಂದು ನಡೆಯಲಿದೆ.
ಕಳೆದ ವರ್ಷ ಜುಲೈನಲ್ಲಿ ನಡೆದ ರಾಜ್ಯಸಭಾ ಚುನಾವಣೆಯ ಕೊನೆಯ ಸುತ್ತಿನಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಎಂಟು ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ ರಾಜಸ್ಥಾನದಲ್ಲಿ ಮೂರು ಸ್ಥಾನಗಳನ್ನು ಉಳಿಸಿಕೊಂಡಿದೆ ಮತ್ತು ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದನ್ನು ಗೆದ್ದಿದೆ.
ನಿಮ್ಮ ಕಾಮೆಂಟ್ ಬರೆಯಿರಿ