ಬೆಳಗಾವಿ: ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಯುದ್ಧ ಭೀತಿ ಇದೆ ಎಂದು ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಪರೀತ ಮಳೆಯಿಂದ ಎರಡು ದೇಶಗಳು ನಾಶ ಆಗುತ್ತದೆ. ಭಾರತದಲ್ಲಿ ಜಲಪ್ರಳಯ ಆಗುವ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದರು.
ಭೂಕಂಪನಗಳು, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸುತ್ತದೆ. ವಿಷಾನಿಲ ಬೀಸುವ ಪ್ರಸಂಗವೂ ಇದೆ. ಭೂಕಂಪನದಿಂದ ದೊಡ್ಡ ದೊಡ್ಡ ನಗರಗಳಿಗೆ ಅಪಾಯವಾಗಬಹುದು.ಜಾಗತಿಕ ಮಟ್ಟದಲ್ಲಿ ವಿಷಾನಿಲದ ಪರಿಣಾಮ ಭಾರತದ ಮೇಲೆ ಆಗಲಿದೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುವ ಪ್ರಸಂಗವೂ ಇದೆ. ಜನರು ಎಚ್ಚರಿಕೆ ವಹಿಸಬೇಕು ಎಂದು ಸ್ವಾಮೀಜಿ ಹೇಳಿದರು.
ಚಂದ್ರಯಾನ-3 ಯಶಸ್ವಿಯಾಗಿ ಒಳ್ಳೆಯದಾಗಲಿದೆ ಎಂದು ಹೇಳಿದ ಸ್ವಾಮೀಜಿ, ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ, ಇನ್ನೂ ಸಮಯವಿದೆ. ನೋಡಿ ಹೇಳುತ್ತೇವೆ. ಮುಖ್ಯವಾಗಿ ದೈವದ ಬಲ ಮನುಷ್ಯರಿಗೆ ಬೇಕು. ಯಾರು ದೈವ ನಂಬುತ್ತಾರೆಯೋ ಅವರಿಗೆ ತೊಂದರೆಯಿಲ್ಲ. ಕೆಲವರಿಗೆ ದೈವಬಲ ಇದ್ದರೂ ತೊಂದರೆ ಆಗುತ್ತದೆ. ಯಾಕೆಂದರೆ ಅದು ಪ್ರಕೃತಿಯ ನಿಯಮ ಎಂದರು.
ರಾಜ್ಯ ರಾಜಕಾರಣ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ರಾಜಕಾರಣದ ಬಗ್ಗೆ ಏನೂ ಹೇಳಲ್ಲ, ಆದರೆ ಸರ್ಕಾರಕ್ಕೆ ತೊಂದರೆಯಿಲ್ಲ. ಪಕ್ಷಾಂತರದ ಬಗ್ಗೆಯೂ ಚುನಾವಣೆ ಪೂರ್ವವೇ ಹೇಳಿದ್ದೆ. ರಾಜಕೀಯ ಅಲ್ಲೋಲ ಕಲ್ಲೋಲ ಆಗಲಿದೆ ಎಂದು ಹೇಳಿದ್ದೆ. ಈಗ ಅಸ್ಥಿರತೆ ಉಂಟಾಗುತ್ತಿದೆ ಎಂದರು. ಈ ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಆಗುವ ಯೋಗ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಇವರದ್ದು ಮುಗಿಯಲಿ. ಒಮ್ಮೆ ಮಹಿಳೆಯರಿಗೆ ಮುಖ್ಯಮಂತ್ರಿ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ