ನವದೆಹಲಿ: ‘ಪ್ರೆಸಿಡೆಂಟ್ ಆಫ್ ಭಾರತ’ ಹೆಸರಿನಲ್ಲಿ ಜಿ 20 ಔತಣಕೂಟದ ಆಹ್ವಾನಗಳನ್ನು ಕಳುಹಿಸಲಾಗಿದ್ದು, ʼಇಂಡಿಯಾʼಕ್ಕೆ ‘ಭಾರತ’ ಎಂದು ಕರೆಯಲು ಯಾವುದೇ ಸಾಂವಿಧಾನಿಕ ಆಕ್ಷೇಪವಿಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. ಆದರೆ “ಗಣಿಸಲಾಗದ ಬ್ರ್ಯಾಂಡ್ ಮೌಲ್ಯ” ಹೊಂದಿರುವ ‘ಇಂಡಿಯಾ’ವನ್ನು ತ್ಯಜಿಸಿ ಸರ್ಕಾರವು ಸಂಪೂರ್ಣವಾಗಿ “ಮೂರ್ಖತನ ಪ್ರದರ್ಶಿಸಲಾರದು ಎಂದು ತಾನು ಭಾವಿಸುವುದಾಗಿ ಅವರು ಹೇಳಿದ್ದಾರೆ.
ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರು ‘ಇಂಡಿಯಾ’ ಎಂಬ ಹೆಸರನ್ನು ಆಕ್ಷೇಪಿಸಿದ್ದರು. ಏಕೆಂದರೆ ಅದು “ನಮ್ಮ ದೇಶವು ಬ್ರಿಟಿಷ್ ರಾಜ್ನ ಉತ್ತರಾಧಿಕಾರಿ ದೇಶವಾಗಲಿದೆ ಮತ್ತು ಪಾಕಿಸ್ತಾನವು ಪ್ರತ್ಯೇಕಗೊಳ್ಳುತ್ತಿರುವ ರಾಜ್ಯವಾಗಲಿದೆ” ಎಂಬುದೇ ಅವರ ಆಕ್ಷೇಪಣೆಗೆ ಕಾರಣವಾಗಿತ್ತು, ಆದರೆ ಬಿಜೆಪಿ ಜಿನ್ನಾ ದೃಷ್ಟಿಕೋನವನ್ನು ಬೆಂಬಲಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ತರೂರ್ ಹೇಳಿದ್ದಾರೆ.
G20 ಔತಣಕೂಟಕ್ಕೆ ಆಮಂತ್ರಣಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಂಪ್ರದಾಯಿಕ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರಸಿಡೆಂಟ್ ಆಫ್ ಭಾರತ’ ಎಂದು ಬದಲಾಯಿಸಿರುವುದು ಮೋದಿ ಸರ್ಕಾರವು ʼಇಂಡಿಯಾʼ ಹೆಸರನ್ನು ಕೈಬಿಟ್ಟು ʼಭಾರತʼ ಎಂದು ಬದಲಾಯಿಸಲು ಯೋಜಿಸುತ್ತಿದೆ ಎಂಬ ಊಹಾಪೋಹ ಭಾರೀ ಚರ್ಚೆಗೆ ಕಾರಣವಾಗಿದೆ.
ಎಕ್ಸ್ನಲ್ಲಿನ ಪೋಸ್ಟ್ನಲ್ಲಿ, ಶಶಿ ತರೂರ್ ಅವರು ‘ಭಾರತ’ ದೇಶದ ಎರಡು ಅಧಿಕೃತ ಹೆಸರುಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. “ದೇಶದ ಎರಡು ಅಧಿಕೃತ ಹೆಸರುಗಳಲ್ಲಿ ಒಂದಾಗಿರುವ ʼಇಂಡಿಯಾʼವನ್ನು ‘ಭಾರತ’ ಎಂದು ಕರೆಯಲು ಯಾವುದೇ ಸಾಂವಿಧಾನಿಕ ಆಕ್ಷೇಪಣೆ ಇಲ್ಲದಿದ್ದರೂ, ಲೆಕ್ಕಿಸಲಾಗದ ಬ್ರ್ಯಾಂಡ್ ಮೌಲ್ಯವನ್ನು ಹೊಂದಿರುವ ‘ಇಂಡಿಯಾ’ವನ್ನು ಸಂಪೂರ್ಣವಾಗಿ ತ್ಯಜಿಸುವಷ್ಟು ಸರ್ಕಾರವು ಮೂರ್ಖತನ ಪ್ರದರ್ಶಿಸಲಾರದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. “ಇತಿಹಾಸದ ಪುನರಾವರ್ತಿತ ಹೆಸರು, ಪ್ರಪಂಚದಾದ್ಯಂತ ಗುರುತಿಸಲ್ಪಟ್ಟ ಹೆಸರು ಹೀಗೆ ನಾವು ಎರಡೂ ಪದಗಳನ್ನು ಬಳಸುವುದನ್ನು ಮುಂದುವರಿಸಬೇಕು” ಎಂದು ಅವರು ಹೇಳಿದರು.
ಭಾರತದ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 9 ರಿಂದ 10 ರವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಜಿ 20 ಶೃಂಗಸಭೆ ನಡೆಯಲಿದೆ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿಶ್ವದಾದ್ಯಂತದ ಹಲವಾರು ರಾಷ್ಟ್ರಗಳ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ