1700 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಮುಂದಾದ ಸರ್ಕಾರ

ಶಿವಮೊಗ್ಗ: ರಾಜ್ಯದಲ್ಲಿ 1,700 ಗ್ರಾಮ ಲೆಕ್ಕಾಧಿಕಾಗಳನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾರದರ್ಶಕತೆ ತರಲು ಈ ಪ್ರಕ್ರಿಯೆಗೆ ಕಂದಾಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಏಕರೂಪದ ವ್ಯವಸ್ಥೆ ರೂಪಿಸಲಾಗುತ್ತಿದೆ. ನೇಮಕಾತಿ ಪ್ರಕ್ರಿಯೆ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಮುಂದಿನ 15 ದಿನಗಳ ಒಳಗಾಗಿ ಇ-ಆಡಳಿತ ಜಾರಿಗೊಳಿಸಲಾಗುತ್ತದೆ. ತಾಲ್ಲೂಕು ಕಚೇರಿ ಹಾಗೂ ಮೇಲಿನ ಎಲ್ಲ ಕಚೇರಿಗಳ ಕಡತಗಳು ಇ-ಆಫೀಸ್ ಮೂಲಕವೇ ವಿಲೇವಾರಿ ಆಗಲಿವೆ. ಕಡತಗಳು ಡಿಜಿಟಲೈಸ್ ಆಗಲಿವೆ. ಜನರು ಕಚೇರಿಗೆ ಅಲೆಯುವುದು ತಪ್ಪಲಿದೆ ಎಂದರು.
ಸರ್ವೆ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ. ಅಲ್ಲಿಯೂ ನೇಮಕಾತಿ ಅಗತ್ಯವಿದೆ. ಪರವಾನಗಿ ಪಡೆದ 2,000 ಸರ್ವೆಯರ್‌ಗಳಿಗೆ ಪರೀಕ್ಷೆ ಪೂರ್ಣಗೊಳಿಸಲಾಗಿದೆ. ಅವರಿಗೂ ತರಬೇತಿ ನೀಡಿದ ನಂತರ ಡಿಸೆಂಬರ್‌ನಿಂದ ಅವರ ಸೇವೆ ಪಡೆಯಲಾಗುವುದು. 354 ಸರ್ವೆ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement