ಬೆಂಗಳೂರು: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ತಾಯಿ ಉಷಾ ಸುನಕ್ ಅವರು ನಗರದಲ್ಲಿಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಂಡಿದ್ದರು.
ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿಯೊಂದಿಗೆ ಸುನಕ್ ತಾಯಿ ತಾಯಿ ಉಷಾ ಸುನಕ್ ಸಹ ಭಾರತಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ದೆಹಲಿಯಿಂದ ಬೆಂಗಳೂರಿಗೆ ಬಂದ ಉಷಾ ಸುನಕ್ ಅವರು ತಮ್ಮ ಬೀಗತಿ ಸುಧಾಮೂರ್ತಿ ಅವರೊಂದಿಗೆ ಬೆಂಗಳೂರಿನ ಶಾಸಕ ಉದಯ ಗರುಡಾಚಾರ್ ಅವರ ಪತ್ನಿ ಮೇದಿನಿ ಗರುಡಾಚಾರ್ ಅವರು ಆಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಚಿಕ್ಕಪೇಟೆ ಶಾಸಕ ಡಾ. ಉದಯ ಬಿ ಗರುಡಾಚಾರ್ ಅವರ ಜಯನಗರದ ನಿವಾಸದಲ್ಲಿ ಕೃಷ್ಣನ ವಿವಿಧ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಉಷಾ ಸುನಕ್ ಅವರು ಅದರಲ್ಲಿ ಪಾಲ್ಗೊಂಡರು. ಅಲ್ಲದೆ, ಸಾಂಪ್ರದಾಯಿಕವಾಗಿ ಕೃಷ್ಣನಿಗೆ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಉಷಾ ಸುನಕ್ ಬೀಗತಿ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಸುಧಾ ಮೂರ್ತಿ, ಡಾ. ಉದಯ ಗರುಡಾಚಾರ್, ಮೇದಿನಿ ಉದಯ್ ಗರುಡಾಚಾರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ವಿ. ಮಂಜುನಾಥ್, ನಿವಾಸಿಗಳ ಕಲ್ಯಾಣ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ