ಬೆಳಗಾವಿ: ಲೋಕೋಪಯೋಗಿ ಇಲಾಖೆಯಲ್ಲಿ ಮಾಡಿದ ಕಾಮಗಾರಿಗಳ ಬಿಲ್ ಬಾಕಿ ಉಳಿಸಿಕೊಂಡ ಕಾರಣಕ್ಕೆ, ಗುತ್ತಿಗೆದಾರ ಒಬ್ಬರು ಇಲ್ಲಿನ ಪಿಡಬ್ಲ್ಯುಡಿ ಕಚೇರಿ ಆವರಣದಲ್ಲಿ ಬುಧವಾರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಬೆಳಗಾವಿ ಕೋಟೆ ಆವರಣದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಗೆ ಬಂದ ನಾಗಪ್ಪ ಭಾಂಗಿ ಎಂಬವರು ಕಾರ್ಯಪಾಲಕ ಎಂಜಿನಿಯರ್ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸುತ್ತ ಇದ್ದ ಕೆಲವರು ಅವರ ಕೈಯಿಂದ ವಿಷದ ಬಾಟಲಿ ಕಿತ್ತುಕೊಂಡು, ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
2022ರಲ್ಲಿ ಹಲಗಾ ಗ್ರಾಮ ಮತ್ತು ತಿಗಡಿ ಗ್ರಾಮದ ನಡುವೆ ರಸ್ತೆ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ನಾಗಪ್ಪ ಪಡೆದುಕೊಂಡಿದ್ದರು. ಕಾಮಗಾರಿ ಮುಗಿದ್ದಿದ್ದರೂ ಗುತ್ತಿಗೆಯ ಹಣ ಮಂಜೂರು ಮಾಡಿರಲಿಲ್ಲ. ನಾಗಪ್ಪ ಅವರು ಕಾಮಗಾರಿ ಮುಗಿಸಿ ವರ್ಷ ಕಳೆದರೂ ಇದರ ಬಿಲ್ ನೀಡಿರಲಿಲ್ಲ. ಹೀಗಾಗಿ, ವಿಷದ ಬಾಟಲಿಯೊಂದಿಗೆ ಲೋಕೋಪಯೋಗಿ ಇಲಾಖೆಯ ಕಚೇರಿಗೆ ನಾಗಪ್ಪ ಬಂದಿದ್ದಾರೆ. ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಎಕ್ಸಿಕೆಟಿವ್ ಎಂಜಿನಿಯರ್ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಸಚಿವರ ತವರಿನಲ್ಲೇ ಈ ಘಟನೆ ನಡೆದಿದ್ದು, ಚರ್ಚೆಗೆ ಗ್ರಾಸವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ