ಆಕರ್ಷಕ ಜಂಬೂ ಸವಾರಿ, ಪಂಜಿನ ಕವಾಯತಿನೊಂದಿಗೆ ಮೈಸೂರು ದಸರಾಕ್ಕೆ ವರ್ಣರಂಜಿತ ತೆರೆ

ಮೈಸೂರು: ವಿಜಯದಶಮಿಯ ಪ್ರಮುಖ ಆಕರ್ಷಣೆಯಾದ ಮೈಸೂರಿನ ಜಂಬೂ ಸವಾರಿಯನ್ನು ಮಂಗಳವಾರ ಲಕ್ಷಾಂತರ ಜನರು ವೀಕ್ಷಿಸಿದರು. ನಾಡದೇವತೆ ಚಾಮುಂಡೇಶ್ವರಿ ವಿರಾಜಮಾನಳಾಗಿದ್ದ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಆನೆ ಅರಮನೆ ಆವರಣದಿಂದ ಬನ್ನಿಮಂಟಪ ದವರೆಗೂ ಹೊತ್ತು ಸಾಗಿತು. ಇತರ 14 ಗಜಪಡೆಗಳು ಅಭಿಮನ್ಯುವಿಗೆ ಸಾಥ್ ನೀಡಿದವು.
ಈ ವೇಳೆ ಕರ್ನಾಟಕದ ಅಶ್ವದಳ ಪೊಲೀಸರ ನೇತೃತ್ವದಲ್ಲಿ ಮೆರವಣಿಗೆಯೂ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ನಂದಿಧ್ವಜ ಪೂಜೆಯಲ್ಲಿ ಪಾಲ್ಗೊಂಡ ನಂತರ ಅರಮನೆ ಮುಂಭಾಗದಿಂದ ಕಲಾತಂಡಗಳು, ಸ್ತಬ್ಧಚಿತ್ರಗಳ ಮರವಣಿಗೆ ಆರಂಭವಾಯಿತು. ಮೆರವಣಿಗೆಯಲ್ಲಿ ರಾಜ್ಯದ 31 ಜಿಲ್ಲೆಗಳು ಮತ್ತು ವಿವಿಧ ಪ್ರಮುಖ ಸರ್ಕಾರಿ ಇಲಾಖೆಗಳ ಆಕರ್ಷಕ ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು.
ಬೆಂಗಳೂರು ನಗರ ಜಿಲ್ಲೆ ಇಸ್ರೋದ ಚಂದ್ರಯಾನ-3 ಸಾಧನೆಯನ್ನು ಪ್ರದರ್ಶಿಸಿ ಗಮನ ಸೆಳೆಯಿತುಮೆರವಣಿಗೆಯು ಅರಮನೆಯಿಂದ ಬನ್ನಿಮಂಟಪಕ್ಕೆ ತಲುಪುತ್ತಿದ್ದಂತೆ ಉತ್ಸವ ಮುಕ್ತಾಯವಾಯಿತು.
ಬನ್ನಿಮಂಟಪದ ಮೈದಾನದಲ್ಲಿ ಸಿಎಆರ್, ಡಿಎಆರ್, ಕಮಾಂಡೋ ಪೊಲೀಸ್, ಪೊಲೀಸ್ ಬ್ಯಾಂಡ್, ಅಶ್ವಾರೋಹಿ ದಳ, ಪೊಲೀಸ್ ಪಡೆಗಳಿಂದ ಆಕರ್ಷಕ ಪಥಸಂಚಲನ ನಡೆದವು. . ಬೈಕ್ ಸ್ಟಂಟ್ಸ್, ಕುದುರೆ ಸವಾರಿ, ಪಂಜಿನ ಕವಾಯತು ಟೆಂಟ್ ಪೆಗ್ಗಿಂಗ್, ಲೇಸರ್ ಲೈಟ್ ಸೇರಿ ಅನೇಕ ಸಾಹಸ ಕ್ರೀಡೆಗಳ ಪ್ರದರ್ಶನವಾಯಿತು.
ಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ನಡೆದ ಆಕರ್ಷಕ ಪಂಜಿನ ಕವಾಯತು ರೋಮಾಂಚನಗೊಳಿಸಿತು. ಅವರು ಪಂಜು ಹಿಡಿದು ವಿವಿಧ ಆಕೃತಿ ಮೂಡಿಸಿದರು.ನಂತರ 2023ನೇ ಸಾಲಿನ ಮೈಸೂರು ದಸರಾಗೆ ತೆರೆ ಎಳೆಯಲಾಯಿತು. ಅಕ್ಟೋಬರ್‌ 15ರಂದು ಹಂಸಲೇಖ ಅವರು ಚಾಮುಂಡಿಬೆಟ್ಟದಲ್ಲಿ ಇತಿಹಾಸ ಪ್ರಸಿದ್ಧ ಮೈಸೂರು ದಸರಾಕ್ಕೆ ಚಾಲನೆ ನೀಡಿದ್ದರು. . ದಸರಾದ 10 ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕುಸ್ತಿ ಕೂಡ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು.
ದಸರಾ ಮಹೋತ್ಸವದ ಕೊನೆಯ ದಿನದ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಜನರು ನೆರೆದಿದ್ದರು. ಪ್ರಪಂಚದಾದ್ಯಂತದ ಜನರು ಆಗಮಿಸಿದ್ದರು. ಕೆಟ್ಟದ್ದರ ಮೇಲೆ ಒಳ್ಳೆಯದು ವಿಜಯ ಎಂಬುದರ ಸಂಕೇತವಾಗಿ ವಿಜಯದಶಮಿ ಅಥವಾ ದಸರಾವನ್ನು ಆಚರಿಸಲಾಗುತ್ತದೆ.

ಪ್ರಮುಖ ಸುದ್ದಿ :-   ಸನಾತನ ಧರ್ಮ ನಿರ್ಮೂಲನೆ ಹೇಳಿಕೆ : ಉದಯನಿಧಿ ಸ್ಟಾಲಿನ್‌ ಗೆ ಜಾಮೀನು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement