ಕಾರವಾರ: ಶಿರಸಿ-ಕುಮಟಾ ಮಾರ್ಗದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಳು ತಿಂಗಳ ಕಾಲ ಬಂದ್ ಮಾಡುವಂತೆ ನೀಡಿದ್ದ ಆದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಹಿಂಪಡೆದಿದ್ದಾರೆ.
ಏಳು ತಿಂಗಳವರೆಗೆ ಈ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಂದಲೂ ತೀವ್ರ ವಿರೋಧ ಬಂದ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಸೂಚನೆಯಂತೆ ರಸ್ತೆ ಬಂದ್ ಮಾಡಿ ವಾಹನಗಳ ಸಂಚಾರಕ್ಕೆ ಹೇರಿದ್ದ ನಿರ್ಬಂಧವನ್ನು ಹಿಂಪಡೆದಿದ್ದಾರೆ.
ಸಾಗರಮಾಲಾ ಯೋಜನೆ ಅಡಿ 440 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿ ಕಾಮಗಾರಿಯನ್ನು 2021ರಲ್ಲಿ ಪ್ರಾರಂಭ ಮಾಡಲಾಗಿತ್ತು. ಕಾಮಗಾರಿಗೆ ವೇಗ ನೀಡಲು ಹೆದ್ದಾರಿ ಬಂದ್ ಮಾಡುವಂತೆ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಪಡೆದ ಕಂಪನಿ ಕೇಳಿಕೊಂಡಿತ್ತು. ಹೀಗಾಗಿ ಬದಲಿ ಮಾರ್ಗ ಸೂಚಿಸಿ ರಸ್ತೆ ಬಂದ್ ಮಾಡಲು ಆದೇಶ ನೀಡಲಾಗಿತ್ತು.
ಆದರೆ ಘಟ್ಟದ ಮೇಲಿನ ಭಾಗದಿಂದ ಕರಾವಳಿ ಭಾಗಕ್ಕೆ ಬರಲು ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿತ್ತು. ಅವರು ಹೆಚ್ಚು ದೂರ ಕ್ರಮಿಸಬೇಕಾಗಿತ್ತು. ಹೀಗಾಗಿ ಆದೇಶ ಹಿಂಪಡೆದಿದ್ದು ಘಟ್ಟದಲ್ಲಿ ಸೇತುವ ಕಾಮಗಾರಿ ಮಾಡುವಾಗ ಮಾತ್ರ ಕೆಲವು ದಿನಗಳ ಮಟ್ಟಿಗೆ ಬಂದ್ ಮಾಡುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ಹಿತ ಗಮನಿಸಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ