ಹೈದರಾಬಾದ್: ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷವಾದ ಸಿಪಿಎಂ ಕಾಂಗ್ರೆಸ್ನೊಂದಿಗೆ ಮುನಿಸಿಕೊಂಡಿದ್ದು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ.
ಆದರೆ ಇಂಡಿಯಾ ಮೈತ್ರಿಕೂಟದ ಮತ್ತೊಂದು ಸದಸ್ಯ ಪಕ್ಷವಾದ ಸಿಪಿಐ, ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡುವವರೆಗೆ ಎರಡು ದಿನ ಕಾದು ನೋಡಲು ತೀರ್ಮಾನಿಸಿದೆ.
ಆಡಳಿತ ವಿರೋಧಿ ಮತಗಳು ಒಡೆದರೆ ಅದು ಬಿಆರ್ಎಸ್ಗೆ ಅನುಕೂಲ ಮಾಡಲಿರುವುದರಿಂದ ಈ ಮತಗಳನ್ನು ಒಡೆಯದಿರಲು ಎಡಪಕ್ಷಗಳು ಮತ್ತು ಕಾಂಗ್ರೆಸ್ ನಿರ್ಧರಿಸಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದವು. ಆದರೆ ಸೀಟು ಹಂಚಿಕೆ ಕುರಿತು ಹಲವು ಸುತ್ತಿನ ಮಾತುಕತೆಗಳು ನಡೆದ ಬಳಿಕವೂ ಎರಡೂ ಪಕ್ಷಗಳ ನಡುವೆ ಒಮ್ಮತ ಮೂಡಿರಲಿಲ್ಲ. ಸೀಟು ಹಂಚಿಕೆ ಸಂದರ್ಭದಲ್ಲಿ ಸಿಪಿಎಂ ಮೂರು ಸ್ಥಾನಗಳನ್ನು ಬಿಟ್ಟುಕೊಡಲು ಕೋರಿತ್ತು. ಕಾಂಗ್ರೆಸ್ ಎರಡು ಸ್ಥಾನಗಳನ್ನು ಮಾತ್ರ ಬಿಟ್ಟುಕೊಡಲು ಕಾಂಗ್ರೆಸ್ ಸಹಮತ ಸೂಚಿಸಿತ್ತು, ಅದಕ್ಕೂ ಸಿಪಿಎಂ ಒಪ್ಪಿತ್ತು. ಆದರೆ ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಅದನ್ನು ನೀಡಲು ಅನುಮಾನಿಸಿತು. ಹೀಗಾಗಿ ತನ್ನ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಗುರುವಾರ ಮಧ್ಯಾಹ್ನ 3ರೊಳಗೆ ಸೀಟು ಹಂಚಿಕೆ ಬಗ್ಗೆ ಅಂತಿಮಗೊಳಿಸುವಂತೆ ಕಾಂಗ್ರೆಸ್ಗೆ ಸಿಪಿಎಂ ಗಡುವು ನೀಡಿತ್ತು.
ಆದರೆ ಕಾಂಗ್ರೆಸ್ನಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಸಿಪಿಎಂ 24 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಪ್ರಕಟಿಸಿದೆ. ಹಾಗೂ ಪಕ್ಷವು 17 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನೂ ಪ್ರಕಟಿಸಿತು.
ನಿಮ್ಮ ಕಾಮೆಂಟ್ ಬರೆಯಿರಿ