ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವ್ಯಾಪ್ತಿಯ ಹೆಡದಾಳು ಗ್ರಾಮದಲ್ಲಿ ಬುಧವಾರ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮೃತ ಮಹಿಳೆಯನ್ನು 45 ವರ್ಷದ ಮೀನಾ ಎಂದು ಗುರುತಿಸಲಾಗಿದೆ.
ಮಹಿಳೆ ಮತ್ತು ಇತರರು ತಮ್ಮ ಮನೆಯಿಂದ ಜಮೀನಿನ ಕಡೆಗೆ ಹೋಗುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೆಡದಾಳು ಗ್ರಾಮದ ಬಳಿ ಸಾಗುತ್ತಿದ್ದಾಗ ಮಾರ್ಗ ಮಧ್ಯೆ ಪಕ್ಕದ ಅರಣ್ಯ ಪ್ರಾಂತ್ಯದಿಂದ ಏಕಾಏಕಿ ಈ ಗುಂಪಿನ ಕಡೆಗೆ ಕಾಡಾನೆಯೊಂದು ಓಡಿಬಂದಿದೆ. ಕೂಡಲೇ ಕೂಲಿಕಾರರು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಆದರೆ, ಮೀನಾ ಮಾತ್ರ ಬೇಗನೇ ತಪ್ಪಿಸಿಕೊಳ್ಳಲು ಆಗದೇ ಕೆಳಕ್ಕೆ ಬಿದ್ದಿದ್ದಾರೆ. ಕಾಡಾನೆಯು ಕೂಲಿಕಾರರನ್ನು ಓಡಿಸಿಕೊಂಡು ಹೋಗುವ ಭರದಲ್ಲಿ ಮೀನಾರವರ ತಲೆ ಮೇಲೆ ಕಾಲಿಟ್ಟು ಓಡಿಹೋಗಿದೆ. ಅದರಿಂದಾಗಿ, ಮೀನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಏಳು ಆನೆಗಳ ಹಿಂಡು ಗ್ರಾಮದ ಸಮೀಪದಲ್ಲಿಯೇ ಬೀಡುಬಿಟ್ಟಿದ್ದು, ಅವುಗಳನ್ನು ಕೂಡಲೇ ಕಾಡಿಗೆ ಓಡಿಸಬೇಕು ಎಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಕೆಲವು ತಿಂಗಳುಗಳಿಂದ ಈ ಪ್ರಾಂತ್ಯದಲ್ಲಿ ಕಾಡಾನೆಗಳು ಓಡಾಡಿಕೊಂಡಿದ್ದು, ಆ ವಿಚಾರವನ್ನು ತಿಂಗಳುಗಳ ಮುಂಚೆಯೇ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ