ಹಾಸನಾಂಬೆ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ಕರೆಂಟ್‌ ಶಾಕ್‌

ಹಾಸನ: ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಕರೆಂಟ್ ಶಾಕ್ ಹೊಡೆದಿದ್ದು, ಹಲವರು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ.
ಹಾಸನಾಂಬ ದೇಗುಲದಲ್ಲಿ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾಗ ವಿದ್ಯುತ್ ಶಾಕ್ ನಿಂದ ಗಾಯಗೊಂಡು ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನೂಕು ನುಗ್ಗಲು ಆಗದಂತೆ ನಿರ್ವಹಣೆ ಮಾಡಲು ಬಳಸಿದ ಬ್ಯಾರಿಕೇಡ್‌ಗಳ ನಡುವೆ ಹಲವು ಜನರು ನಿಂತಿದ್ದರು. ಆ ವೇಳೆ ಇದ್ದಕ್ಕಿದ್ದಂತೆ ಹಲವರಿಗೆ ವಿದ್ಯುತ್ ಶಾಕ್ ಅನುಭವಾಗಿದೆ. ವಿದ್ಯುತ್ ಶಾಕ್ ಅನುಭವವಾಗುತ್ತಿದ್ದಂತೆಯೇ ಭಕ್ತರು ಏಕಾಏಕಿ ಓಡಲು ಆರಂಭಿಸಿದ್ದು, ಹದಿನೇಳು ಜನರನ್ನು ಬ್ಯಾರಿಕೇಡ್‌ಗಳಿಂದ ಹೊರಕ್ಕೆ ಸ್ಥಳಾಂತರಿಸಲಾಯಿತು. ಮಹಿಳೆಯರು ಸೇರಿದಂತೆ ಹಲವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಭಕ್ತರು ನಿಜವಾಗಿಯೂ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.ಈ ಸಂಬಂಧ ಚೆಸ್ಕಾಂ ಅಧಿಕಾರಿಗಳು ವಸ್ತುಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಗದ್ದಲದಲ್ಲಿ ಕೆಲ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement