ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಬಗ್ಗೆ ತಮಿಳು ಖಳ ನಟ ಮನ್ಸೂರ್ ಅಲಿ ಖಾನ್ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಮೆಗಾಸ್ಟಾರ್ ಚಿರಂಜೀವಿ ಖಂಡಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ತ್ರಿಷಾ ಬಗ್ಗೆ ಮನ್ಸೂರ್ ಅಲಿ ಖಾನ್ ನೀಡಿರುವ ಹೇಳಿಕೆಗಳು ಖಂಡನೀಯ ಎಂದು ಹೇಳಿದ್ದಾರೆ.
ಕಲಾವಿದರಿಗೆ ಮಾತ್ರವಲ್ಲದೇ, ಮಹಿಳೆರಿಗೆ ಅಥವಾ ಹೆಣ್ಣುಮಕ್ಕಳಿಗೆ ಈ ರೀತಿಯ ಅಸಹ್ಯಕರ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇದು ವಿಕೃತಿಯ ಮನಸ್ಥಿತಿ ಹೊಂದಿರುವವರು ಬಳಸುವ ಪದಗಳು. ಈ ಸಮಯದಲ್ಲಿ ನಾನು ತ್ರಿಷಾ ಅವರ ಪರ ನಿಲ್ಲುತ್ತೇನೆ’ ಎಂದು ಅವರು ಹೇಳಿದ್ದಾರೆ.
‘ಕಲಾವಿದರಿಗೆ ಆಗುವ ಅನ್ಯಾಯವನ್ನು ವಿರೋಧಿಸುವುದರ ಜೊತೆಗೆ ನಿಂದನಾತ್ಮಕ ಹೇಳಿಕೆಗಳಿಗೆ ಗುರಿಯಾಗುವ ಪ್ರತಿಯೊಬ್ಬ ಮಹಿಳೆಯರ ಪರ ನನ್ನ ಧ್ವನಿ ಇರಲಿದೆ’ ಎಂದು ಚಿರಂಜೀವಿ ಹೇಳಿದ್ದಾರೆ.
ಇತ್ತೀಚೆಗೆ ಟಿ.ವಿ ಮಾಧ್ಯಮಯೊಂದಕ್ಕೆ ಸಂದರ್ಶನ ನೀಡಿದ ಮನ್ಸೂರ್ ಅಲಿ ಖಾನ್ ಅವರು ‘ಲಿಯೋ’ ಸಿನಿಮಾ ಬಗ್ಗೆ ಮಾತನಾಡುತ್ತಾ, ಚಿತ್ರದ ನಾಯಕಿ ತ್ರಿಶಾ ಎಂದು ತಿಳಿದಾಗ ಸಂತೋಷವಾಗಿತ್ತು. ನನ್ನ ಹಾಗೂ ತ್ರಿಶಾ ನಡುವೆ ರೇಪ್ ಅಥವಾ ಬೆಡ್ರೂಂ ದೃಶ್ಯ ಇರುತ್ತದೆ ಎಂದು ಭಾವಿಸಿದ್ದೆ. ಆದರೆ ಅದು ಸುಳ್ಳಾಯಿತು. ಲಿಯೋ ಸಿನಿಮಾದವರು ಚಿತ್ರೀಕರಣದುದ್ದಕ್ಕೂ ತ್ರಿಶಾ ಅವರ ಮುಖವನ್ನೇ ನನಗೆ ತೋರಿಸಲಿಲ್ಲ ಎಂದು ಹೇಳಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ನಿರ್ದೇಶಕ ಲೋಕೇಶ ಕನಕರಾಜ, ಗಾಯಕಿ ಚಿನ್ಮಯಿ ಶ್ರೀಪಾದ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಸೇರಿದಂತೆ ಹಲವರು ಮನ್ಸೂರ್ ಅಲಿ ಖಾನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗವು ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ತಮಿಳುನಾಡು ಡಿಜಿಪಿಗೆ ಸೋಮವಾರ ಸೂಚಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ