ನವದೆಹಲಿ: ತನ್ನ ಫೇಸ್ಬುಕ್ ಸ್ನೇಹಿತ ನಸ್ರುಲ್ಲಾಳನ್ನು ಮದುವೆಯಾಗಲು ಜುಲೈನಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ್ದ ಭಾರತದ ಮಹಿಳೆ ಅಂಜು ಸ್ವದೇಶಕ್ಕೆ ವಾಪಸಾಗಿದ್ದಾಳೆ. ಆದರೆ, ರಾಜಸ್ಥಾನದ ಭಿವಾಡಿಯ ವಸತಿ ಸಮುಚ್ಛಯದಲ್ಲಿ ವಾಸವಿರುವ ಆಕೆಯ ಮಕ್ಕಳು, ತಾಯಿಯನ್ನು ಭೇಟಿ ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಈ ವಾರ ದೆಹಲಿಗೆ ಬಂದಿಳಿದ ನಂತರ ಅಂಜು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಅಂಜು ಭಿವಾಡಿ ತಲುಪಲಿಲ್ಲ ಅಥವಾ ತನ್ನ ಮಕ್ಕಳನ್ನು ಭೇಟಿಯಾಗಲಿಲ್ಲ ಎಂದು ವರದಿಯಾಗಿದೆ.
ವಾಘಾ ಗಡಿ ಮೂಲಕ ಭಾರತಕ್ಕೆ ಬಂದಿದ್ದ ಅಂಜು ಅವಳನ್ನು ಭದ್ರತಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸಿದ ನಂತರ ಅಮೃತಸರ ವಿಮಾನ ನಿಲ್ದಾಣಕ್ಕೆ ಕರೆದೊಯ್ದಿದ್ದರು. ಅಲ್ಲಿಂದ ಆಕೆ ದೆಹಲಿಗೆ ಪ್ರಯಾಣಿಸಿದ್ದಳು. ಆದರೆ ದೆಹಲಿಯಲ್ಲಿ ಪ್ರಯಾಣಿಸಿದ ಬಳಿಕ ಎಲ್ಲಿಗೆ ಹೋಗಿದ್ದಾಳೆ ಎನ್ನುವುದು ತಿಳಿದಿಲ್ಲ. ಆಕೆ ಭಿವಾಡಿಗೆ ತಲುಪಿಲ್ಲ ಹಾಗೂ ತನ್ನ ಮಕ್ಕಳನ್ನು ಭೇಟಿಯಾಗಿಲ್ಲ.
ಅಂಜು ವಾಸಿಸುತ್ತಿದ್ದ ರಾಜಸ್ಥಾನದ ಭಿವಾಡಿಯ ವಸತಿ ಸಮುಚ್ಛಯದಲ್ಲಿ ರೆಸಿಡೆನ್ಶಿಯಲ್ ಸೊಸೈಟಿಗೆ ಭದ್ರತೆ ಹೆಚ್ಚಿಸಲಾಗಿದೆ. ಎಲ್ಲ ವಾಹನಗಳು ಮತ್ತು ಅಪರಿಚಿತರನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಪ್ರವೇಶಿಸಲು ಅನುಮತಿಸಲಾಗುತ್ತಿದೆ. ಇಂಟೆಲಿಜೆನ್ಸ್ ಬ್ಯೂರೋದ ತಂಡವು ಅಂಜು ಅವರ ಮಕ್ಕಳಾದ 15 ವರ್ಷದ ಮಗಳು ಮತ್ತು ಆರು ವರ್ಷದ ಮಗನನ್ನೂ ವಿಚಾರಣೆ ನಡೆಸಿದೆ.
ಅಂಜು ಪ್ರಕರಣದ ತನಿಖೆ ನಡೆಯುತ್ತಿದೆ ಮತ್ತು ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಭಿವಾಡಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪಕ್ ಸೈನಿ ಹೇಳಿದ್ದಾರೆ. ಬೇಕಿದ್ದರೆ ಅಂಜು ಅವರನ್ನು ಕೂಡ ವಿಚಾರಣೆ ನಡೆಸಿ ಬಂಧಿಸಬಹುದು ಎಂದು ಹೇಳಿದ್ದಾರೆ.
ಅಂಜು ಈ ವರ್ಷದ ಆರಂಭದಲ್ಲಿ ತನ್ನ ಫೇಸ್ಬುಕ್ ಸ್ನೇಹಿತ ನಸ್ರುಲ್ಲಾನನ್ನು ಮದುವೆಯಾಗಲು ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾಕ್ಕೆ ಪ್ರಯಾಣಿಸಿದ ನಂತರ ಸುದ್ದಿಗೆ ಬಂದಳು, ಅವಳು ತಾನು ನಸ್ರಲ್ಲಾನನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಳು. ನಂತರ ಅವಳು ಇಸ್ಲಾಂಗೆ ಮತಾಂತರಗೊಂಡಳು ಮತ್ತು ತನ್ನ ಹೆಸರನ್ನು ಫಾತಿಮಾ ಎಂದು ಮರುನಾಮಕರಣ ಮಾಡಿಕೊಂಡಳು ವರದಿಯಾಗಿತ್ತು.
ಅಂಜು ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದ ನಂತರ, ಆಕೆಯನ್ನು ಪಂಜಾಬ್ ಪೊಲೀಸ್ನ ಗುಪ್ತಚರ ತಂಡ ಮತ್ತು IB ಅಮೃತಸರದಲ್ಲಿ ವಿಚಾರಣೆಗೊಳಪಡಿಸಿತು ಮತ್ತು ನಂತರ ಬುಧವಾರ ದೆಹಲಿಗೆ ಪ್ರಯಾಣಿಸಲು ಅವಕಾಶ ನೀಡಿತು.
ಅಂಜು ದೆಹಲಿಗೆ ಬಂದಿಳಿದಾಗ, ಆಕೆ ಪಾಕಿಸ್ತಾನದಲ್ಲಿ ಉಳಿದುಕೊಂಡಿರುವ ಬಗ್ಗೆ ಕೇಳಲಾಯಿತು, ಆದರೆ ಅವಳು ಅದರ ಬಗ್ಗೆ ಮಾತನಾಡುವುದಿಲ್ಲ. ನಾನು ಈಗಲೇ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾಳೆ.
ತನ್ನ ಭಾರತೀಯ ಪತಿ ಅರವಿಂದಗೆ ವಿಚ್ಛೇದನ ನೀಡಿದ ನಂತರ ತನ್ನ ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾಳೆ.
ಮತ್ತೊಂದೆಡೆ, ಅರವಿಂದ ಅವರು, ಅಂಜು ಪಾಕಿಸ್ತಾನದಿಂದ ಹಿಂದಿರುಗಿದ ಬಗ್ಗೆ ತನಗೆ ತಿಳಿದಿಲ್ಲ ಮತ್ತು “ಅವಳೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಲು ಆಸಕ್ತಿ ಹೊಂದಿಲ್ಲ” ಎಂದು ಹೇಳಿದ್ದಾರೆ.ತಾನು ಮತ್ತು ಅಂಜು ಇನ್ನೂ ವಿಚ್ಛೇದನ ಪಡೆದಿಲ್ಲ. ವಿಚ್ಛೇದನ ನಡೆಯಲು ಮೂರರಿಂದ ಐದು ತಿಂಗಳು ಬೇಕಾಗುತ್ತದೆ ಎಂದು ಅರವಿಂದ ಹೇಳಿದ್ದಾರೆ.
ಅಂಜು ಭಾರತಕ್ಕೆ ಬರಲು ಕೇವಲ ಒಂದು ತಿಂಗಳಿಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಕಾನೂನು ತಜ್ಞರ ಪ್ರಕಾರ, ವಿಚ್ಛೇದನದ ನಂತರವೇ ಅವಳು ತನ್ನ ಮಕ್ಕಳ ಪಾಲನೆಯನ್ನು ಪಡೆಯಬಹುದು ಮತ್ತು ಅದಕ್ಕಿಂತ ಮೊದಲು ಸಾಧ್ಯವಾಗುವುದಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ