ಎಂಎಲ್​ಸಿ ಸಿ.ಪಿ. ಯೋಗೇಶ್ವರ ಬಾವ ಮಹದೇವಯ್ಯ ಶವವಾಗಿ ಪತ್ತೆ

ಚಾಮರಾಜನಗರ: ಶುಕ್ರವಾರ ನಾಪತ್ತೆಯಾಗಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ ಬಾವ ಮಹದೇವಯ್ಯ ಅವರ ಶವ ಚಾಮರಾಜನಗರದ ಹನೂರು ತಾಲೂಕಿನ ರಾಮಾಪುರ ಗ್ರಾಮದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಅಲ್ಲಿನ ನಿರ್ಜನ ಪ್ರದೇಶದಲ್ಲಿ ಶವ ಸಿಕ್ಕಿದ್ದು, ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ ಅವರ ಬಾವ 62 ವರ್ಷದ ಮಹದೇವಯ್ಯ ಅವರು ಶುಕ್ರವಾರ ಚಕ್ಕೆರೆ ಗ್ರಾಮದ ವಡ್ಡರದೊಡ್ಡಿಯಲ್ಲಿರುವ ತಮ್ಮ ತೋಟದ ಮನೆಯಿಂದ ದಿಢೀರ್ ಆಗಿ ನಾಪತ್ತೆಯಾಗಿದ್ದರು. ಮಧ್ಯಾಹ್ನದ ಸುಮಾರಿನಲ್ಲಿ ಸ್ಥಳೀಯರು ಇವರ ಮನೆಗೆ ಹೋಗಿ ನೋಡಿದಾಗ ಮನೆಯ ಬಾಗಿಲು ತೆರೆದಿತ್ತಲ್ಲದೆ, ಕೊಠಡಿಯಲ್ಲಿನ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ, ಮನೆಯಲ್ಲಿರುವ ಚಿನ್ನಾಭರಣಗಳನ್ನು ದೋಚಲಾಗಿತ್ತು. ಹೀಗಾಗಿ ಅವರನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿತ್ತು.

ಈ ಬಗ್ಗೆ ಅವರ ಪುತ್ರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಮಹದೇವಯ್ಯ ಮೊಬೈಲ್ ಲೊಕೇಷನ್‌ ಬೆನ್ನತ್ತಿದ್ದ ಪೊಲೀಸರಿಗೆ ಅವರು ಮೊಬೈಲ್‌ ಲೊಕೇಷನ್‌ ಮಹದೇಶ್ವರ ಬೆಟ್ಟದಲ್ಲಿ ಪತ್ತೆಯಾಗಿತ್ತು.
ಮೊಬೈಲ್ ಲೊಕೇಷನ್ ಜಾಡು ಹಿಡಿದಿದ್ದ ಪೊಲೀಸರು ಶನಿವಾರದಿಂದಲೇ ಚನ್ನಪಟ್ಟಣ ಡಿವೈಎಸ್‌ಪಿ ನೇತೃತ್ವದಲ್ಲಿ 4 ತಂಡಗಳ‌ನ್ನು ರಚಿಸಿ ಮಹದೇವಯ್ಯ ಪತ್ತೆಗೆ ಹುಡುಕಾಟ ಆರಂಭಿಸಿದ್ದರು. ಭಾನುವಾರ ಹನೂರು ತಾಲೂಕಿನ ರಾಮಾಪುರದಲ್ಲಿ ಮಹದೇವಯ್ಯ ಕಾರು ಪತ್ತೆಯಾಗಿತ್ತು.
ಕಾರಿನ ಡಿಕ್ಕಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಹೀಗಾಗಿ ಅವರು ಕೊಲೆಯಾಗಿರುವ ಶಂಕೆ ವ್ಯಕ್ತವಾಗಿತ್ತು.
ಕಾರು ಪತ್ತೆಯಾಗುತ್ತಿದ್ದಂತೆ ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಜಂಟಿ ಹುಡುಕಾಟ ನಡೆಸಿದ್ದರು. ಇಂದು ಸಂಜೆ (ಡಿ.4) ರಾಮಾಪುರದ ಅರಣ್ಯ ಪ್ರದೇಶದಲ್ಲಿ ಮಹದೇವಯ್ಯ ಅವರ ಶವ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 3 ದಿನ ಜೋರಾದ ಗಾಳಿ ಮಳೆಯ ಮುನ್ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement