ಮುಂಬೈ : ಮುಂಬೈ : ಬದುಕಿನ ಆಸೆ ಆಕಾಂಕ್ಷೆ ಹಾಗೂ ಭರವಸೆಯನ್ನು ನಾನು ಕಳೆದುಕೊಂಡಿದ್ದೇನೆ. ನಾನು ಈ ಸ್ಥಿತಿಯಲ್ಲಿ ಜೀವನ ಸಾಗಿಸುದಕ್ಕಿಂತ ಜೈಲಿನಲ್ಲೇ ಸಾಯುವುದು ಉತ್ತಮ’ ಎಂದು ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ ಗೋಯಲ್ ವಿಶೇಷ ನ್ಯಾಯಾಲಯದ ಮುಂದೆ ಕೈಮುಗಿದು ಅಳಲು ತೋಡಿಕೊಂಡರು.
.ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ ಗೋಯಲ್ ಅವರನ್ನು ಕೆನರಾ ಬ್ಯಾಂಕ್ಗೆ ₹538 ಕೋಟಿ ವಂಚಿಸಿದ ಆರೋಪ ಮೇಲೆ ಕಳೆದ ವರ್ಷ ಸೆಪ್ಟೆಂಬರ್ 1ರಂದು ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿತ್ತು. ಸದ್ಯ ಮುಂಬೈನ ಆರ್ಥರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅವರು, ಕಳೆದ ತಿಂಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಗಾಗಿ ಅವರನ್ನು ವಿಶೇಷ ನ್ಯಾಯಾಲಯದಲ್ಲಿ ಶನಿವಾರ ಹಾಜರುಪಡಿಸಲಾಗಿತ್ತು.
ಈ ವೇಳೆ ನ್ಯಾಯಾಧೀಶರ ಎದುರು ಅಳಲು ವ್ಯಕ್ತಪಡಿಸಿದ ಅವರು, ನನ್ನ ಆರೋಗ್ಯ ಕೂಡ ಹದಗೆಟ್ಟಿದೆ. ಪತ್ನಿಯು ಅಂತಿಮ ಹಂತದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಹಾಸಿಗೆ ಹಿಡಿದಿದ್ದಾರೆ. ಏಕೈಕ ಮಗಳೂ ಸಹ ಅನಾರೋಗ್ಯ ಪೀಡಿತಳಾಗಿದ್ದಾಳೆ ಎಂದು ಅಳಲು ತೋಡಿಕೊಂಡರು.
ಇಂತಹ ಪರಿಸ್ಥಿತಿಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರೂ ಆಸ್ಪತ್ರೆಗೆ ಹೋಗಿ ಬಹಳ ಹೊತ್ತಿನವರೆಗೆ ಕಾಯಲು ಆಗುವುದಿಲ್ಲ. ತಪಾಸಣೆಗಾಗಿ ಆಸ್ಪತ್ರೆಗೆ ಪದೇಪದೇ ಹೋಗುವುದು ಕಷ್ಟ. ಆಸ್ಪತ್ರೆಗೆ ಕರೆದೊಯ್ಯುವ ಬದಲು ಜೈಲಿನಲ್ಲೇ ಸಾಯಲು ಬಿಡಿ’ ಎಂದು ಹೇಳಿದರು.
ಗೋಯಲ್ ಅವರ ಮಾತನ್ನು ಆಲಿಸಿದ ವಿಶೇಷ ನ್ಯಾಯಾಧೀಶರು, ‘ ಗೋಯಲ್ ಅವರ ಮತುಗಳನ್ನು ತಾಳ್ಮೆಯಿಂದ ಆಲಿಸಿದ್ದೇನೆ. ಮಾತನಾಡುವಾಗ ಅವರ ದೇಹ ನಡುಗುತ್ತಿತ್ತು. ನಿಂತುಕೊಳ್ಳಲು ಸಹ ಅವರಿಗೆ ಸಹಾಯ ಬೇಕು ಎಂದರು. ಗೋಯಲ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಇ.ಡಿ ಪ್ರತಿಕ್ರಿಯೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಜನವರಿ 16ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ