ಲೋಕಸಭೆ ಚುನಾವಣೆಯಲ್ಲಿ ʼಕೈʼ ಅಭ್ಯರ್ಥಿ ಸೋತರೆ ಸಚಿವರ ತಲೆದಂಡ…!

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸದ ಸಚಿವರ ತಲೆದಂಡ ಆಗಲಿದೆ ಎಂಬ ಎಚ್ಚರಿಕೆಯನ್ನು ಹೈಕಮಾಂಡ್ ನೀಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಗೆಲ್ಲಲು ಹೈಕಮಾಂಡ್ ಪ್ರತಿ ಸಚಿವರಿಗೆ ಜವಾಬ್ದಾರಿ ನೀಡಿದೆ. ಈ ಜವಾಬ್ದಾರಿಯನ್ನು ನಿಭಾಯಿಸದ ಸಚಿವರ ತಲೆ ದಂಡ ಆಗಲಿದೆ ಎಂದೂ ಹೈಕಮಾಂಡ್ ತಿಳಿಸಿದೆ ಎಂದು ಹೇಳಿದರು.
ದೆಹಲಿಯಲ್ಲಿ ಗುರುವಾರ ರಾಜ್ಯದ ಎಲ್ಲ ಸಚಿವರ ಜತೆ ವರಿಷ್ಠರು ಸಭೆ ನಡೆಸಿದ್ದಾರೆ, ಲೋಕಸಭಾ ಚುನಾವಣೆಯಲ್ಲಿ ಸಚಿವರ ಸ್ಪರ್ಧಿಸುವ ಬಗ್ಗೆ ಹೇಳಿಲ್ಲ. ಆದರೆ ನಿರೀಕ್ಷಿತ ಫಲಿತಾಂಶ ಬರದಿದ್ದರೆ ಸಚಿವರ ತಲೆದಂಡ ಆಗಲಿದೆ ಎಂದು ಹೈಕಮಾಂಡ್‌ ಸಂದೇಶ ನೀಡಿದೆ. ಸಚಿವರೆಲ್ಲ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಗೆಲ್ಲುವ ಕಡೆ ಚುನಾವಣೆ ಸೋತರೆ ಅದನ್ನು ಪಕ್ಷವು ಸಹಿಸುವುದಿಲ್ಲ, ಈ ಸೋಲನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂಬ ಎಚ್ಚರಿಕೆಯನ್ನು ಹೈಕಮಾಂಡ್ ಕೊಟ್ಟಿದೆ ಎಂದು ತಿಳಿಸಿದರು.

ಇದು ಯಾರಿಗೆ ಅನ್ವಯವಾಗುತ್ತೆ ಎಂಬುದು ಗೊತ್ತಿಲ್ಲ. ವರಿಷ್ಠರು ಈ ಮಾತನ್ನು ಎಲ್ಲರಿಗೂ ಸಹಜವಾಗಿ ಹೇಳಿದ್ದಾರೆ. ಚುನಾವಣೆಯನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೈಕಮಾಂಡ್ ಈ ರೀತಿ ಹೇಳಿರಬಹುದು ಎಂದರು.
 ವಿರೋಧ ಇಲ್ಲ
ಮಾಜಿ ಸಂಸದ ಮುದ್ದಹನುಮೇಗೌಡರು ಕಾಂಗ್ರೆಸ್‌ಗೆ ಬಂದರೆ ಅದಕ್ಕೆ ನನ್ನ ವಿರೋಧವೇನಿಲ್ಲ ಎಂದು ಹೇಳಿದ ಡಾ. ಜಿ. ಪರಮೇಶ್ವರ, ಆದರೆ ಮುದ್ದಹನುಮೇಗೌಡರು ಟಿಕೆಟ್ ಕೇಳುವ ಹಾಗಿಲ್ಲ. ಟಿಕೆಟ್ ನೀಡುವಾಗ ಮಾನದಂಡದ ಪ್ರಕಾರ ನೀಡಲಾಗುತ್ತದೆ ಎಂದರು.
ಹೆಚ್ಚುವರಿ ಉಪಮುಖ್ಯಮಂತ್ರಿ ಬೇಡಿಕೆ ಬಗ್ಗೆ ಎಐಸಿಸಿ ಅಧ್ಯಕ್ಷರೇ ಸ್ಪಷ್ಟನೆ ನೀಡಿ ಸದ್ಯದ ಪರಿಸ್ಥಿತಿಯಲ್ಲಿ ಆಗುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅದರ ಬಗ್ಗೆ ಈಗ ಚರ್ಚೆ ಅನಗತ್ಯ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement