ವೀಡಿಯೊ…| ನಾಸಿಕದ ಕಲಾರಾಮ ಮಂದಿರದಲ್ಲಿ ನೆಲ ಒರೆಸಿ, ರಾಮ ಭಜನೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

ನಾಸಿಕ್: ಸ್ವಚ್ಛತಾ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಹಾರಾಷ್ಟ್ರದ ನಾಸಿಕದಲ್ಲಿರುವ ಕಲಾರಾಮ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದರು.
ಮೋದಿ ಅವರು ಬಕೆಟ್‌ನೊಂದಿಗೆ ಮಾಪ್ ಸ್ಟಿಕ್ ಹಿಡಿದು ದೇವಾಲಯದ ನೆಲವನ್ನು ಒರೆಸುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ದೇಶಾದ್ಯಂತ ದೇವಾಲಯಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು (ಸ್ವಚ್ಛತಾ ಅಭಿಯಾನ) ಕೈಗೊಳ್ಳುವಂತೆ ಪ್ರಧಾನಿ ಜನರಿಗೆ ಕರೆ ನೀಡಿದ್ದಾರೆ.
ಇದಕ್ಕೂ ಮುನ್ನ ಕಲಾರಾಮ ಮಂದಿರದಲ್ಲಿ ದರ್ಶನ ಹಾಗೂ ಪೂಜೆ ಸಲ್ಲಿಸಿ ಮೋದಿ, ಗೋದಾವರಿ ನದಿಯ ದಡದಲ್ಲಿರುವ ಶ್ರೀರಾಮ ಕುಂಡದಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿ ರಾಮಾಯಣ ಮಹಾಕಾವ್ಯದ ‘ಯುದ್ಧಕಾಂಡ’ ಭಾಗವನ್ನು ಕೇಳಿದ್ದಾರೆ.

ರಾಮನು ಅಯೋಧ್ಯೆಗೆ ಹಿಂದಿರುಗುವುದನ್ನು ಇದು ತಿಳಿಸುತ್ತದೆ. ಇದನ್ನು ಮರಾಠಿಯಲ್ಲಿ ಪ್ರಸ್ತುತಪಡಿಸಲಾಗಿದ್ದು, ಕೃತಕ ಬುದ್ಧಿಮತ್ತೆ (AI) ಅನುವಾದದ ಮೂಲಕ ಹಿಂದಿ ಆವೃತ್ತಿಯಲ್ಲಿ ಪ್ರಧಾನಿ ಮೋದಿ ಅದನ್ನು ಆಲಿಸಿದ್ದಾರೆ. ಹಲವಾರು ಜನ ರಾಮ ಭಜನೆ ಹಾಡುತ್ತಿರುವಾಗ ಪ್ರಧಾನಮಂತ್ರಿಯವರು ತಾಳ ನುಡಿಸುತ್ತಾ ದೇವಾಲಯದಲ್ಲಿ ನೆಲದ ಮೇಲೆ ಕುಳಿತಿರುವ ದೃಶ್ಯಗಳು ವೈರಲ್ ಆಗಿವೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಿ ಮೋದಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

ನಂತರ ನಾಸಿಕದ ತಪೋವನ ಮೈದಾನದಲ್ಲಿ ನಡೆದ ರಾಷ್ಟ್ರೀಯ ಯುವ ಮಹೋತ್ಸವದಲ್ಲಿ ಮಾತನಾಡಿದ ಅವರು, ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪಿಸುವ ಮುನ್ನ ದೇಶಾದ್ಯಂತ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುವಂತೆ ದೇಶದ ಜನತೆಗೆ ಮನವಿ ಮಾಡಿದರು.
ಅಮೃತ ಕಾಲವು ದೇಶದ ಯುವ ಜನರ ಪಾಲಿಗೆ ಸುವರ್ಣ ಯುಗ ಎಂದು ಬಣ್ಣಿಸಿದ ಮೋದಿ, ಯುವ ಜನರ ಶಕ್ತಿ ಕಾರಣದಿಂದ ಜಗತ್ತಿನ ಐದು ಪ್ರಮುಖ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದೆ ಎಂದರು.

ಜಗತ್ತಿನ ಟಾಪ್ 3 ಸ್ಟಾರ್ಟ್ ಅಪ್ ವ್ಯವಸ್ಥೆಗಳಲ್ಲಿ ಭಾರತ ಒಂದು. ಭಾರತವು ದಾಖಲೆಯ ಪೇಟೆಂಟ್‌ಗಳನ್ನು ಪಡೆಯುತ್ತಿದೆ. ಇದೆಲ್ಲದರ ಹಿಂದೆ ದೇಶದ ಯುವಕರು ಇದ್ದಾರೆ. ಅಮೃತ ಕಾಲವು ಈ ದೇಶದ ಯುವ ಜನರ ಪಾಲಿಗೆ ಸುವರ್ಣ ಯುಗ” ಎಂದು ಬಣ್ಣಿಸಿದರು.
ಇದಕ್ಕೂ ಮುಂಚೆ ಅವರು ಸ್ವಾಮಿ ವಿವೇಕಾನಂದ ಅವರ ಜನ್ಮದಿನದ ಪ್ರಯುಕ್ತ ನಾಸಿಕ್‌ನಲ್ಲಿನ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ವಂದಿಸಿದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement