ರಾಮ ಮಂದಿರ ಉದ್ಘಾಟನೆಗೂ ಮುನ್ನ ರಾಮೇಶ್ವರಂನ ಪವಿತ್ರ ಅಗ್ನಿ ತೀರ್ಥ’ ಸಮುದ್ರದಲ್ಲಿ ಮುಳುಗೆದ್ದ ಪ್ರಧಾನಿ ಮೋದಿ | ವೀಕ್ಷಿಸಿ

ರಾಮೇಶ್ವರಂ: ‘ಅಗ್ನಿತೀರ್ಥ’ ಕಡಲತೀರದಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿನ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ರುದ್ರಾಕ್ಷಿ ಮಾಲೆ ಧರಿಸಿದ ಪ್ರಧಾನಿ ಮೋದಿ ತಮಿಳುನಾಡಿನ ಪುರಾತನ ಶಿವ ದೇವಾಲಯವಾದ ರಾಮನಾಥಸ್ವಾಮಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರಿಗೆ ಪುರೋಹಿತರಿಂದ ಸಾಂಪ್ರದಾಯಿಕ ಗೌರವಗಳನ್ನು ನೀಡಲಾಯಿತು. ದೇಗುಲದಲ್ಲಿ ನಡೆಯುತ್ತಿದ್ದ ‘ಭಜನೆ’ಯಲ್ಲೂ ಪಾಲ್ಗೊಂಡರು.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದಲ್ಲಿರುವ ಶಿವ ದೇವಾಲಯವು ರಾಮಾಯಣದೊಂದಿಗೆ ಸಂಪರ್ಕವನ್ನು ಹೊಂದಿದೆ, ಏಕೆಂದರೆ ಇಲ್ಲಿರುವ ಶಿವಲಿಂಗವನ್ನು ಶ್ರೀರಾಮನು ಸ್ಥಾಪಿಸಿದನು. ಶ್ರೀರಾಮ ಮತ್ತು ಸೀತಾದೇವಿ ಇಲ್ಲಿ ಪ್ರಾರ್ಥಿಸಿದರು ಎಂಬುದು ಪ್ರತೀತಿ.

ತಿರುಚಿರಾಪಳ್ಳಿ ಜಿಲ್ಲೆಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ, ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರು ಅದ್ದೂರಿ ಸ್ವಾಗತ ಕೋರಿದರು.ಬದರಿನಾಥ, ದ್ವಾರಕಾ, ಪುರಿ ಮತ್ತು ರಾಮೇಶ್ವರಂ ಚಾರ್ ಧಾಮಗಳಾಗಿವೆ. ಅಲ್ಲದೆ ರಾಮೇಶ್ವರಂ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.
ಮಧ್ಯಾಹ್ನ 2:10ಕ್ಕೆ ಹೆಲಿಕಾಪ್ಟರ್ ಮೂಲಕ ರಾಮೇಶ್ವರಂ ಪಕರುಂಬುವಿನ ಅಮೃತಾನಂದ ಶಾಲಾ ಆವರಣಕ್ಕೆ ಪ್ರಧಾನಿ ಮೋದಿ ಆಗಮಿಸಿದರು. ಅಲ್ಲಿಂದ ಮಧ್ಯಾಹ್ನ 3:10ಕ್ಕೆ ಅಗ್ನಿತೀರ್ಥದಲ್ಲಿ ಪುಣ್ಯಸ್ನಾನ ಮಾಡಿದರು. ನಂತರ ದೇವಸ್ಥಾನದಲ್ಲಿ ರಾಮಾಯಣ ಪಥ ಮತ್ತು ಭಜನಾ ಸಂಧ್ಯಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡರು.

ಪ್ರಸ್ತುತ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಅವರ ‘ಪ್ರಾಣ ಪ್ರತಿಷ್ಠಾ’ದವರೆಗೆ 11 ದಿನಗಳ ಅನುಷ್ಠಾನ ಮಾಡುತ್ತಿರುವ ಪ್ರಧಾನಿ ಮೋದಿ ರಾಮೇಶ್ವರಂಗೆ ಬರುವ ಮೊದಲು ಶನಿವಾರ ತಿರುಚಿರಾಪಳ್ಳಿಗೆ ಆಗಮಿಸಿದರು. ಪ್ರಧಾನಿಯವರು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ, ತಮ್ಮ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ದೇವಾಲಯದ ಆವರಣದಲ್ಲಿ ‘ಆಂಡಾಳ’ ಎಂಬ ಆನೆಯ ಬಳಿ ಆಶೀರ್ವಾದ ಪಡೆದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement