ಜ್ಞಾನವಾಪಿ ಪ್ರಕರಣ : ಶಿವಲಿಂಗದ ಎಎಸ್ಐ ಸಮೀಕ್ಷೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಹಿಂದೂ ಪಕ್ಷಕಾರರು

ನವದೆಹಲಿ: ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇವಾಲಯ ವಿವಾದಕ್ಕೆ ಸಂಬಂಧಿಸಿದಂತೆ ಮಸೀದಿಯಲ್ಲಿ ಪತ್ತೆಯಾದ ಕಾರಂಜಿಯ ವಿವರವಾದ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ನಿರ್ದೇಶನ ನೀಡುವಂತೆ ಕೋರಿ ಹಿಂದೂ ಪಕ್ಷದವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಶಿವಲಿಂಗದ ರಚನೆಯು ಕೃತಕ ಗೋಡೆಗಳಿಂದ ಸುತ್ತುವರೆದಿದ್ದು, ಇದು ಆಧುನಿಕ ನಿರ್ಮಾಣವಾಗಿದೆ ಮತ್ತು ಮೂಲ ಕಟ್ಟಡದೊಂದಿಗೆ ನಂಟು ಹೊಂದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಶಿವಲಿಂಗ ವಝೂಖಾನಾದ ಕಾರಂಜಿಯಾಗಿದೆ ಎಂದು ಮಸೀದಿ ಸಮಿತಿ ಹೇಳಿದ್ದು,ಮುಸ್ಲಿಮರಿಗೆ ಅದು ಧಾರ್ಮಿಕವಾಗಿ ಮಹತ್ವದ್ದಲ್ಲ ಎಂದು ಹಿಂದೂ ಪಕ್ಷಕಾರರು ಹೇಳಿಕೊಂಡಿದ್ದಾರೆ.

ಶಿವಲಿಂಗದ ರಚನೆ ಹೊರತುಪಡಿಸಿ ಅತಿಕ್ರಮಿಸದಂತಹ ತಂತ್ರಜ್ಞಾನ ಬಳಸಿಕೊಂಡು ಮಸೀದಿ ಆವರಣ ಸಮೀಕ್ಷೆ ಮಾಡಲು ಎಎಸ್ಐಗೆ ಈ ಹಿಂದೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ ಮಿಶ್ರಾ ಅವರನ್ನೊಳಗೊಂಡ ಪೀಠ ಅನುಮತಿ ನೀಡಿತ್ತು. ಬಳಿಕ ವರದಿ ಸಲ್ಲಿಸಿದ್ದ ಎಎಸ್‌ಐ ಮಸೀದಿಯನ್ನು ಹಿಂದೂ ಪ್ರಾಚೀನ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಿತ್ತು.
ಶಿವಲಿಂಗದ ನೈಜತೆ ಬಗ್ಗೆ ನಿರ್ಧರಿಸಲು ಎಎಸ್ಐ ಸಮೀಕ್ಷೆಯ ಅಗತ್ಯವಿದೆ. ಶಿವಲಿಂಗ, ಅದರ ಸುತ್ತಲಿನ ಪ್ರದೇಶ, ಗೋಡೆಗಳು ಮತ್ತು ಸಂಪೂರ್ಣ ಮೊಹರು ಮಾಡಿದ ಪ್ರದೇಶವನ್ನು ಎಎಸ್‌ಐ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement