‘ಹಿಂದೂ’ ಪದದ ಕುರಿತು ಆಕ್ಷೇಪಾರ್ಹ ಹೇಳಿಕೆ: ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ಬೆಂಗಳೂರು : ಹಿಂದು ಪದದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ವಿಚಾರಣೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
‘ಹಿಂದೂ’ ಎಂಬ ಪದವು ಪರ್ಷಿಯನ್ ಪದವಾಗಿದ್ದು, ಅದಕ್ಕೆ ‘ಅಶ್ಲೀಲ’ ಎಂಬ ಅರ್ಥವಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸತೀಶ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಶನಿವಾರ ಆದೇಶಿಸಿದೆ. ವಕೀಲ ದಿಲೀಪಕುಮಾರ ಅವರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಆದೇಶ ಹೊರಡಿಸಿದೆ.
ನವೆಂಬರ್ 2022 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, “ಹಿಂದೂ ಎಂಬ ಪದ ಎಲ್ಲಿಂದ ಬಂತು? ಇದು ಪರ್ಷಿಯನ್ ಪದ. ಭಾರತಕ್ಕೂ ಇದಕ್ಕೂ ಏನು ಸಂಬಂಧ? ‘ಹಿಂದೂ’ ಎಂಬ ಪದವು ಹೇಗೆ ನಮ್ಮದಾಯಿತು? ಇದನ್ನು ಚರ್ಚಿಸಬೇಕು ಎಂದು ಹೇಳಿದ್ದರು.

“ವಿಕಿಪೀಡಿಯಾದಲ್ಲಿ ಈ ಪದ ಎಲ್ಲಿಂದ ಬಂತು ಎಂದು ನೋಡಿ. “ಹಿಂದೂ ಪದದ ಬಗ್ಗೆ ತಿಳಿದರೆ ನಾಚಿಕೆಯಾಗುತ್ತದೆ. ಅದು ಅಶ್ಲೀಲ, ಕೊಳಕು ಎಂಬ ಅರ್ಥ ನೀಡುತ್ತದೆ. ಇದು ಈಗಾಗಲೇ ವೆಬ್‌ಸೈಟ್‌ನಲ್ಲಿದೆ. ಅದು ಬೇರೆಡೆಯಿಂದ ಬಂದ ಪದ”, ಅವರು ಹೇಳಿದ್ದರು.
ಜಾರಕಿಹೊಳಿ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿ ಅದು ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿತ್ತು. ನಂತರ ಪಕ್ಷದ ಹೈಕಮಾಂಡ್ ಮಧ್ಯ ಪ್ರವೇಶಿಸಿ ಸಚಿವರ ಹೇಳಿಕೆಯನ್ನು “ತೀವ್ರ ದುರದೃಷ್ಟಕರ” ಎಂದು ಹೇಳಿಕೆ ನೀಡಿತು.
ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದ್ದ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರು, ಹಿಂದೂ ಧರ್ಮ ಒಂದು ಜೀವನ ವಿಧಾನವಾಗಿದೆ ಮತ್ತು ನಾಗರಿಕತೆಯ ವಾಸ್ತವವಾಗಿದೆ. ಕಾಂಗ್ರೆಸ್ ನಮ್ಮ ರಾಷ್ಟ್ರವನ್ನು ಪ್ರತಿ ಧರ್ಮ, ನಂಬಿಕೆಯನ್ನು ಗೌರವಿಸುತ್ತದೆ. ಇದು ಭಾರತದ ಮೂಲತತ್ವವಾಗಿದೆ. ಸತೀಶ ಜಾರಕಿಹೊಳಿ ಅವರ ಹೇಳಿಕೆಯು ಅತ್ಯಂತ ದುರದೃಷ್ಟಕರ ಮತ್ತು ತಿರಸ್ಕರಿಸಲು ಅರ್ಹವಾಗಿದೆ. ನಾವು ಇದನ್ನು ಖಂಡಿಸುತ್ತೇವೆ ಎಂದು ಟ್ವೀಟ್‌ ಮಾಡಿದ್ದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement