ನವದೆಹಲಿ: ಆದಾಯ ತೆರಿಗೆ (ಐಟಿ) ಇಲಾಖೆ ತನ್ನ ವಿರುದ್ಧ ಪ್ರಾರಂಭಿಸಿದ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ಸಿ) ಸಲ್ಲಿಸಿದ್ದ ಮೂರು ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಯಶವಂತ ವರ್ಮಾ ಮತ್ತು ಪುರುಷೀಂದ್ರ ಕುಮಾರ ಕೌರವ್ ಅವರಿದ್ದ ವಿಭಾಗೀಯ ಪೀಠವು ಮಾರ್ಚ್ 20 ರಂದು ತೀರ್ಪನ್ನು ಕಾಯ್ದಿರಿಸಿತ್ತು.
2014-15, 2015-16 ಮತ್ತು 2016-17ನೇ ಸಾಲಿನ ಆದಾಯ ಸಲ್ಲಿಕೆ ವಿವರಗಳಿಗೆ ಸಂಬಂಧಿಸಿದಂತೆ ಐಟಿ ಇಲಾಖೆಯು ತನ್ನ ವಿರುದ್ಧ ಆರಂಭಿಸಿರುವ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಅರ್ಜಿಗಳನ್ನು ಸಲ್ಲಿಸಿತ್ತು.
ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಾರಂಭಿಸುವಲ್ಲಿನ ವಿಳಂಬಕ್ಕೆ ಸಂಬಂಧಿಸಿದ ಆಕ್ಷೇಪಣೆಯೊಂದನ್ನು ಹೊರತುಪಡಿಸಿ ಕಾಂಗ್ರೆಸ್ ಎತ್ತಿರುವ ಎಲ್ಲ ಆಕ್ಷೇಪಣೆಗಳನ್ನು ತಾನು ನಿಭಾಯಿಸಿದ್ದೇನೆ ಎಂದು ನ್ಯಾಯಾಲಯವು ಇಂದು ತೀರ್ಪು ನೀಡಿದ ಸಂದರ್ಭದಲ್ಲಿ ಹೇಳಿತು.
ಕಾಂಗ್ರೆಸ್ ಪಕ್ಷದ ಪರವಾಗಿ ವಾದಿಸಿದ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ ಅವರು, ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಕೆಲ ಮಿತಿಗಳಿಂದ ನಿರ್ಬಂಧಿಸಲಾಗಿದ್ದು, ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿ ಈ ತರಹ ಮಾಡಲಾಗುತ್ತಿದೆ ಎಂದು ಹೇಳಿದ್ದರು.
ಇದಕ್ಕೆ ಉತ್ತರಿಸಿದ ಐಟಿ ಇಲಾಖೆ ಪರ ವಕೀಲರು, 2014 – 15, 2015-16 ಹಾಗೂ 2016-17ರ ಆರ್ಥಿಕ ವರ್ಷಗಳಲ್ಲಿ ಕಾಂಗ್ರೆಸ್ ನಿಂದ ಸಲ್ಲಿಕೆಯಾಗಿರುವ ತೆರಿಗೆಯನ್ನು ಪುನರ್ ಪರಿಶೀಲಿಸುವ ಎಲ್ಲಾ ಕಾನೂನಾತ್ಮಕ ಅಧಿಕಾರ ತನಗಿದೆ. ಅಲ್ಲದೆ, ಆ ವರ್ಷಗಳಲ್ಲಿ ಕಾಂಗ್ರೆಸ್ ಪಡೆದಿರುವ ದೇಣಿಗೆಯಲ್ಲಿ ಅಂದಾಜು 520 ಕೋಟಿ ರೂ.ಗಳನ್ನು ಮುಚ್ಚಿಡಲಾಗಿದೆ. ಆದಕಾರಣ, ತಾನು ಕಾಂಗ್ರೆಸ್ ತೆರಿಗೆ ಪ್ರಕ್ರಿಯೆಯನ್ನು ನೋಡುತ್ತಿರುವುದಾಗಿ ಹೇಳಿತು. ವಾದ ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು, ಕಾಂಗ್ರೆಸ್ ಮನವಿಯನ್ನು ತಿರಸ್ಕರಿಸಿದರು.
ಹಿರಿಯ ವಕೀಲರಾದ ಅಭಿಷೇಕ ಮನು ಸಿಂಘ್ವಿ, ವಿವೇಕ ತಂಖಾ, ಎ.ಎಸ್.ಚಾಂದಿಯೋಕ್ ಮತ್ತು ಪಿ.ಸಿ.ಸೇನ್, ವಕೀಲರಾದ ಪ್ರಸನ್ನ, ಅಮಿತ ಭಂಡಾರಿ, ಸಿದ್ಧಾರ್ಥ, ವಿಪುಲ್ ತಿವಾರಿ, ಇಂದರ್ ಸಿಂಗ್, ಸಿಮ್ರಾನ್ ಕೊಹ್ಲಿ, ವಿಧುಷಿ ಕೇಶರಿ, ಕನಿಷ್ಕಾ ಸಿಂಗ್, ನಿಖಿಲ್ ಭಲ್ಲಾ ಮತ್ತು ಸ್ವಾತಿ ಆರ್ಯ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಪ್ರತಿನಿಧಿಸಿದ್ದರು ಹಿರಿಯ ವಕೀಲರಾದ ಜೊಹೆಬ್ ಹುಸೇನ್ ಮತ್ತು ವಿಪುಲ್ ಅಗರ್ವಾಲ್, ವಕೀಲರಾದ ಸಂಜೀವ ಮೆನನ್, ಸಾಕ್ಷಿ ಶೈರ್ವಾಲ್ ಮತ್ತು ವಿವೇಕ್ ಗುರ್ನಾನಿ ಐಟಿ ಇಲಾಖೆಯನ್ನು ಪ್ರತಿನಿಧಿಸಿದರು
ನಿಮ್ಮ ಕಾಮೆಂಟ್ ಬರೆಯಿರಿ