ನವದೆಹಲಿ: ವೈಜ್ಞಾನಿಕ ತಳಹದಿಯ ಔಷಧಗಳನ್ನು ಗುರಿಯಾಗಿಸಿಕೊಂಡ ಜಾಹೀರಾತುಗಳನ್ನು ನಿಲ್ಲಿಸಲು ವಿಫಲವಾಗಿ ಕೇವಲ ನೆಪಮಾತ್ರದ ಕ್ಷಮೆಯಾಚನೆ ಅಫಿಡವಿಟ್ ಸಲ್ಲಿಸಿದ್ದ ಪತಂಜಲಿ ಆಯುರ್ವೇದ ಸಂಸ್ಥೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಇಂತಹ ಜಾಹೀರಾತುಗಳ ಪ್ರಸಾರ ನಿಲ್ಲಿಸುವಂತೆ ನ್ಯಾಯಾಲಯ ಕಂಪನಿಗೆ ಆದೇಶಿಸಿರುವ ಬಗ್ಗೆ ತನ್ನ ಮಾಧ್ಯಮ ವಿಭಾಗಕ್ಕೆ ತಿಳಿದಿಲ್ಲ ಎಂದು ಪತಂಜಲಿ ನೀಡಿದ ಹೇಳಿಕೆಯನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಗಂಭೀರವಾಗಿ ಪರಿಗಣಿಸಿತು ಹಾಗೂ ಸಂಸ್ಥೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಪತಂಜಲಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಸಲ್ಲಿಸಿದ್ದ ಕ್ಷಮೆಯಾಚನಾ ಅಫಿಡವಿಟ್ನಲ್ಲಿ ಈ ಹೇಳಿಕೆ ನೀಡಿದ್ದರು. ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಕೆಂಡಾಮಂಡಲವಾದ ನ್ಯಾಯಾಲಯ “ಇದು ಸಮರ್ಥನೀಯವಲ್ಲದಿದ್ದರೆ, ನೀವು ಕ್ಷಮೆಯಾಚಿಸಿಯೂ ಪ್ರಯೋಜನವಿಲ್ಲ. ಇದು ಸುಪ್ರೀಂ ಕೋರ್ಟ್ಗೆ ನೀಡಿದ ಭರವಸೆಯ ಸಂಪೂರ್ಣ ಉಲ್ಲಂಘನೆ. ಈ ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ (ಪತಂಜಲಿಯ) ಮಾಧ್ಯಮ ವಿಭಾಗಕ್ಕೆ ತಿಳಿದಿಲ್ಲ, ಅದೊಂದು ದ್ವೀಪದಂತೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ನೀವು ಗಂಭೀರವಾದ ಮುಚ್ಚಳಿಕೆಯನ್ನು ಉಲ್ಲಂಘಿಸಿದ್ದೀರಿ. ಈ ನಡೆ ತೋರಿಕೆಯದ್ದಾಗಿದೆ. ನಿಮ್ಮ ಕ್ಷಮೆಯಾಚನೆಯನ್ನು ನಾವು ಯಾಕೆ ಒಪ್ಪಬೇಕು?” ಎಂದು ನ್ಯಾಯಮೂರ್ತಿ ಕೊಹ್ಲಿ ಕೇಳಿದರು.
ನೀವು ‘ನ್ಯಾಯಾಲಯಕ್ಕೆ ಅನಿಸಿದರೆ, ಇತ್ಯಾದಿ’ ಎಂದು ಅಫಿಡವಿಟ್ನಲ್ಲಿ ಹೇಳುತ್ತೀರಿ… ನಮಗೆ ನಿಮ್ಮ ಹೃದಯವನ್ನು ನೋಡಲು ಸಾಧ್ಯವಿಲ್ಲ. ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ಈ ರೀತಿ ವ್ಯವಹರಿಸುವುದಿಲ್ಲ. ಕೆಲವು ಪ್ರಕರಣಗಳಲ್ಲಿ, ಕೆಲವು ಸಂದರ್ಭಗಳನ್ನು ಅವುಗಳ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾಗುತ್ತದೆ. ಅಷ್ಟೊಂದು ಉದಾರತೆಯನ್ನು ತೋರಲಾಗದು ಎಂದು ನ್ಯಾಯಮೂರ್ತಿ ಅಮಾನುಲ್ಲಾ ಹೇಳಿದರು. ವಚನಭ್ರಷ್ಟತೆ ವಿಚಾರದಲ್ಲಿ ಪತಂಜಲಿ ಸಂಸ್ಥೆ ತಪ್ಪೆಸಗಿದೆ ಎಂದು ಪೀಠ ಹೇಳಿತು.
ದಾಖಲೆಗಳನ್ನು ಲಗತ್ತಿಸಲಾಗಿದೆ ಎಂದು ನೀವು ಹೇಳಿದ್ದೀರಿ, ಆದರೆ ದಾಖಲೆಗಳನ್ನು ನಂತರ ಸೃಷ್ಟಿಸಲಾಗಿದೆ. ನಾವು ನಿಮ್ಮ ಮೇಲೆ ಗೂಬೆ ಕೂರಿಸುತ್ತಿಲ್ಲ, ಆದರೆ ನಾವು ಗಮನಿಸಿದ ಎಲ್ಲವನ್ನೂ ಹೇಳುತ್ತಿದ್ದೇವೆ” ಎಂದು ನ್ಯಾಯಮೂರ್ತಿ ಕೊಹ್ಲಿ ಹೇಳಿದರು.
ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ಪತಂಜಲಿಗೆ ಎಚ್ಚರಿಕೆ ನೀಡಿದ ಕೆಲ ದಿನಗಳ ಬಳಿಕ ನಂತರ ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ ಅವರು ಪತ್ರಿಕಾಗೋಷ್ಠಿ ನಡೆಸಿದ ರೀತಿಯನ್ನು ಕೂಡ ಪೀಠ ಟೀಕಿಸಿತು.
ಮಾರ್ಚ್ 19ರಂದು ನ್ಯಾಯಾಲಯ ನೀಡಿದ ಆದೇಶದಂತೆ ಬಾಬಾ ರಾಮದೇವ ಮತ್ತು ಬಾಲಕೃಷ್ಣ ಇಬ್ಬರೂ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರಿಗೆ ಖುದ್ದು ಹಾಜರಿಯಿಂದ ವಿನಾಯಿತಿ ಇಲ್ಲ. ಮುಂದಿನ ವಿಚಾರಣೆ ವೇಳೆಯೂ ಹಾಜರಿರಬೇಕಾಗುತ್ತದೆ ಎಂದು ನ್ಯಾಯಾಲಯ ಇಂದು ಸ್ಪಷ್ಟಪಡಿಸಿತು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 10 ರಂದು ನಡೆಯಲಿದ್ದು ಅಂದು ಕ್ಷಮೆಯಾಚನೆ ಕುರಿತು ಸೂಕ್ತ ಅಫಿಡವಿಟ್ ಸಲ್ಲಿಸುವಂತೆ ಪತಂಜಲಿ ಮತ್ತು ಅದರ ಆಡಳಿತ ಮಂಡಳಿಗೆ ಆದೇಶಿಸಲಾಯಿತು.
ಬಾಬಾ ರಾಮದೇವ ಪರ ಹಿರಿಯ ವಕೀಲ ಬಲ್ಬೀರ್ ಸಿಂಗ್, ಪತಂಜಲಿ ಪರ ಹಿರಿಯ ನ್ಯಾಯವಾದಿ ವಿಪಿನ್ ಸಾಂಘಿ, ಪತಂಜಲಿ ವಿರುದ್ಧ ಪ್ರಕರಣ ದಾಖಲಿಸಿದ್ದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪರವಾಗಿ ಹಿರಿಯ ವಕೀಲ ಪಿ ಎಸ್ ಪಟ್ವಾಲಿಯಾ, ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ