ಭೋಪಾಲ್ : ಮಧ್ಯಪ್ರದೇಶದ ಮಂಡಲಾ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರದ ವೇಳೆ ಕಟ್ಟಿದ್ದ ಕಾಂಗ್ರೆಸ್ ಪಕ್ಷದ ಬ್ಯಾನರ್ನಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಫಗ್ಗನ್ ಸಿಂಗ್ ಕುಲಸ್ತೆ ಅವರ ಫೋಟೊ ರಾರಾಜಿಸಿದೆ. ಇದು ಕಾಂಗ್ರೆಸ್ ನಾಯಕರ ಮುಜುಗರಕ್ಕೆ ಕಾರಣವಾಗಿದೆ.
ಈ ಘಟನೆ ಬಗ್ಗೆ ಕಾಂಗ್ರೆಸ್ ಅದನ್ನು ‘ಮಾನವ ದೋಷ’ ಎಂದು ಹೇಳಿದೆ. ಹಾಗೂ ತಪ್ಪು ಗಮನಕ್ಕೆ ಬಂದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಆ ಫೋಟೋದ ಮೇಲೆ ಬೇರೆ ಕಾಂಗ್ರೆಸ್ ನಾಯಕರ ಫೋಟೋ ಅಂಟಿಸಿದ್ದಾರೆ. ಆದರೆ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ ಯಾದವ್ ಅವರು, ‘ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ’ ಎಂದು ಲೇವಡಿ ಮಾಡಿದ್ದಾರೆ.
ಮಂಡಲಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಧನೋರಾ ಎಂಬಲ್ಲಿ ಸೋಮವಾರ ರಾಹುಲ್ ಅವರ ಪ್ರಚಾರ ಸಭೆ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಕಟ್ಟಿದ್ದ ಕಾಂಗ್ರೆಸ್ ಬ್ಯಾನರ್ನಲ್ಲಿ ಬಿಜೆಪಿ ಅಭ್ಯರ್ಥಿ ಫಗ್ಗನ್ ಸಿಂಗ್ ಕುಲಸ್ತೆ ಅವರ ಚಿತ್ರವೂ ಇತ್ತು. ತಪ್ಪು ಗಮನಕ್ಕೆ ಬಂದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಕುಲಸ್ತೆ ಅವರ ಚಿತ್ರದ ಮೇಲೆ ಕಾಂಗ್ರೆಸ್ ಶಾಸಕ ರಜನೀಶ ಹರವಂಶ್ ಸಿಂಗ್ ಅವರ ಚಿತ್ರವನ್ನು ಅಂಟಿಸಿ ಅದನ್ನು ಕಾಣದಂತೆ ಮಾಡಿದ್ದಾರೆ. ಆದರೆ ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಈ ಚುನಾವಣೆಯನ್ನು ಕಾಂಗ್ರೆಸ್ ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎಂಬುದನ್ನು ಇದು ತೋರಿಸುತ್ತದೆ. ಅವರ ಬ್ಯಾನರ್ನಲ್ಲಿ ನಮ್ಮ ಅಭ್ಯರ್ಥಿಯ ಚಿತ್ರ ಹಾಕಿದ್ದಾರೆ. ಅವರು ಈಗಾಗಲೇ ಸೋಲು ಒಪ್ಪಿಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಮೋಹನ ಯಾದವ್ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ