ಬೆಳಗಾವಿ : ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಕೊಲೆ ಆರೋಪಿ ಫಯಾಜ್ ತಂದೆ ಬಾಬಾ ಸಾಹೇಬ್ ಸುಭಾನಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ನನ್ನ ಮಗನ ಕೃತ್ಯಕ್ಕೆ ಕರ್ನಾಟಕ ಜನತೆಯಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. ನನ್ನ ಮಗನಿಗೆ ಕಾನೂನು ಯಾವ ಶಿಕ್ಷೆ ಕೊಟ್ಟರೂ ಅದನ್ನು ನಾನು ಸ್ವಾಗತಿಸುತ್ತೇನೆ. ನನ್ನ ಮಗ ಮಾಡಿದ ತಪ್ಪಿಗೆ ದಯವಿಟ್ಟು ನೇಹಾ ಕುಟುಂಬದವರು, ರಾಜ್ಯದ ಜನತೆ ಹಾಗೂ ಮುನವಳ್ಳಿ ಜನತೆ ನನ್ನನ್ನು ಕ್ಷಮಿಸಬೇಕು ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ.
ಮಗನ ಈ ಕೃತ್ಯದಿಂದ ಮುನವಳ್ಳಿ ಊರಿಗೇ ಕಪ್ಪು ಚುಕ್ಕೆ ಬಂದಿದೆ. ನನ್ನ ಮಗ ಫಯಾಜ್ಗೆ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.ನಮ್ಮನ್ನು ಮುನವಳ್ಳಿ ಜನ ಬೆಳೆಸಿದ್ದಾರೆ. ಅವರ ಋಣ ತೀರಿಸಲು ಸಾಧ್ಯವಿಲ್ಲ. ನನ್ನ ಮಗ ಮಾಡಿದ ತಪ್ಪಿಗೆ ನಾನು ಮುನವಳ್ಳಿ ಹಾಗೂ ರಾಜ್ಯದ ಜನರ ಬಳಿ ಕ್ಷಮೆ ಕೇಳುತ್ತೇನೆ. ನಮ್ಮೂರಿನ ಜನ ನನ್ನನ್ನು ಕ್ಷಮಿಸಬೇಕು ಎಂದು ಕೇಳಿಕೊಂಡಿದ್ದಾರೆ.
ದಯವಿಟ್ಟು ಯಾವುದೇ ಯುವಕರು, ನನ್ನ ಮಗನ ರೀತಿಯಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಬಾರದು. ನೇಹಾ ತಂದೆಯ ಬಳಿ ಕ್ಷಮೆಯಾಚಿಸುತ್ತೇನೆ. ಯಾಕೆಂದರೆ ನೇಹಾ ಕೂಡ ನನಗೆ ಮಗಳಿದ್ದಂತೆ. ಇವತ್ತು ಅವರ ಮಗಳಿಗೆ ಆದ ಕಷ್ಟನೇ ನಾಳೆ ನನ್ನ ಮಗಳಿಗೂ ಆದರೂ ಕಷ್ಟವಲ್ಲವೇ ಎಂದು ಹೇಳುತ್ತ ಕಣ್ಣೀರಿಟ್ಟಿದ್ದಾರೆ.
ನಾನು ಯಾವತ್ತೂ ಯಾರಿಗೂ ಕೆಟ್ಟದ್ದು ಮಾಡಿಲ್ಲ, ಈಗ ನನ್ನ ಮಗ ದೇಶದ ಮುಂದೆ ತಲೆ ತಗ್ಗಿಸುವ ಕೆಲಸ ಮಾಡಿಬಿಟ್ಟಿದ್ದಾನೆ ಎಂದು ಕಣ್ಣೀರು ಹಾಕಿರುವ ಅವರು,
ಇಂತಹ ಘಟನೆಗಳಿಂದ ಮುಂದೆ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಜನ ಭಯಪಡುತ್ತಾರೆ. ಹೀಗಾಗಿ ಯಾರೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಾರೋ, ಹೆಣ್ಣು ಮಕ್ಕಳನ್ನು ಕೊಲೆ ಮಾಡುತ್ತಾರೋ ಅಂತಹವರಿಗೆ ಮುಂದಿನ ದಿನಗಳಲ್ಲಿ ಯಾರೂ ಅಂಥ ಕೃತ್ಯ ಮಾಡಬಾರದು, ಆ ರೀತಿಯ ಶಿಕ್ಷೆ ನೀಡಬೇಕು ಎಂದು ಹೇಳಿದ್ದಾರೆ.
ನನ್ನ ಮಗನನ್ನು ಭಾರತೀಯ ಸೇನೆಗೆ ಸೇರಿಬೇಕು ಎಂಬ ಆಸೆ ನನ್ನದಾಗಿತ್ತು. ಆದರೆ ಆತ ಕ್ಷಮಿಸಲಾರದ ತಪ್ಪು ಮಾಡಿದ್ದಾನೆ.
6 ವರ್ಷದಿಂದ ನಾನು ಹಾಗೂ ಪತ್ನಿ ಕೌಟುಂಬಿಕ ಕಲಹದಿಂದ ಬೇರೆಯಾಗಿದ್ದೇವೆ. ಮಗ ಹಾಗೂ ಮಗಳು ನನ್ನ ಪತ್ನಿಯ ಜೊತೆ ವಾಸವಾಗಿದ್ದಾರೆ.ನಾನು ಒಬ್ಬನೇ ಬೇರೆ ವಾಸವಾಗಿದ್ದೇನೆ. 2 ವರ್ಷದಿಂದ ಮಗ ನನ್ನ ಜೊತೆ ಸರಿಯಾಗಿ ಮಾತಾಡುತ್ತಿರಲಿಲ್ಲ. ಹಣ ಬೇಕಾದರೆ ಮಾತ್ರ ಆತ ನನಗೆ ಫೋನ್ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ