ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಜನರು ವಿಪರೀತ ತಾಪಮಾನದಿಂದಾಗಿ ತತ್ತರಿಸಿದ್ದಾರೆ. ತಾಪಮಾನ ಹೆಚ್ಚಳದಿಂದ ಶಾಲಾ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ. ಉತ್ತರ ಪ್ರದೇಶದ ಕನೌಜ್ನ ಶಾಲೆಯೊಂದು ಬಿಸಿಲಿನ ತಾಪಮಾನ ಎದುರಿಸಲು ಶಾಲಾ ಕೊಠಡಿಯನ್ನೇ ಈಜುಕೊಳವನ್ನಾಗಿ ಪರಿವರ್ತಿಸಿದೆ.
ಶಾಖದ ಅಲೆಯಿಂದಾಗಿ ತಾಪಮಾನ ದಾಖಲೆ ಮಟ್ಟದಲ್ಲಿ ಏರಿದ್ದರಿಂದ ಅನೇಕ ಮಕ್ಕಳು ಮನೆಯಲ್ಲೇ ಇರುವ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ಶಾಲೆ ಮಕ್ಕಳು ಶಾಲೆಗೆ ಬರುವಂತೆ ಮಾಡಲು ಈ ಕ್ರಮವನ್ನು ತೆಗೆದುಕೊಂಡಿದೆ.
ಮಹಾಸೌನಪುರ ಗ್ರಾಮದ ಪ್ರಾಥಮಿಕ ಶಾಲೆಯ ಹಲವಾರು ವಿದ್ಯಾರ್ಥಿಗಳು ತರಗತಿಯೊಳಗಿನ ಕೃತಕ ಈಜುಕೊಳದಲ್ಲಿ ಎರಡು ಅಡಿಯಷ್ಟು ನೀರಿನಲ್ಲಿ ಆಟವಾಡುತ್ತಿರುವುದನ್ನು ಕಾಣಬಹುದು.
“ಕೆಲವು ಸಮಯಗಳಿಂದ ಪಾದರಸದ ಮಟ್ಟವು ಸುಮಾರು 40 ಡಿಗ್ರಿ ಸೆಲ್ಸಿಯಸ್ ನಡುವೆ ಇದೆ. ವಿಪರೀತ ತಾಪಮಾನದಿಂದಾಗಿ ಶಾಲೆಗೆ ಮಕ್ಕಳು ಬರುವುದು ಗಣನೀಯವಾಗಿ ಕಡಿಮೆಯಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ವೈಭವ ರಜಪೂತ್ ಕೆಲಮಾಧ್ಯಮಗಳಿಗೆ ಹೇಳಿದ್ದಾರೆ.
“ಆದರೆ ಶಾಲೆಯ ಒಂದು ಕೊಠಡಿಗೆ ನೀರು ತುಂಬಿದ ನಂತರ, ಮಕ್ಕಳು ಬರಲು ಪ್ರಾರಂಭಿಸಿದರು. ಅವರು ಈಗ ಅಧ್ಯಯನ ಮಾಡುತ್ತಿದ್ದಾರೆ ಮತ್ತು ಕೊಠಡಿಯಲ್ಲಿನ ನೀರಿನಲ್ಲಿ ಈಜುವ ಮೂಲಕ ತೀವ್ರ ಶಾಖದಿಂದ ಸಮಾಧಾನ ಪಡೆಯುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಭಾರತದಾದ್ಯಂತ ತೀವ್ರ ಉಷ್ಣತೆ
ಸೋಮವಾರದಂದು ಗರಿಷ್ಠ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ಗೆ ಏರುವುದರೊಂದಿಗೆ ಭಾರತದ ಅನೇಕ ಪ್ರದೇಶಗಳು ಸುಡುವ ಶಾಖದಿಂದ ತತ್ತರಿಸುತ್ತಿವೆ. ಪೂರ್ವ ಭಾರತದಲ್ಲಿ ಮೇ 1 ರವರೆಗೆ ಮತ್ತು ದಕ್ಷಿಣ ಭಾರತ ಪ್ರದೇಶದಲ್ಲಿ ಮುಂದಿನ ಐದು ದಿನಗಳಲ್ಲಿ ತೀವ್ರತರವಾದ ಬಿಸಿ ವಾತಾವರಣದ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸೋಮವಾರ ತಿಳಿಸಿದೆ.
ಹವಾಮಾನ ಇಲಾಖೆಯು ಕೆಂಪು ಬಣ್ಣದ ಎಚ್ಚರಿಕೆಯನ್ನು ನೀಡಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ತೀವ್ರವಾದ ಶಾಖದ ಸಾಧ್ಯತೆಯಿದೆ ಎಂದು ಹೇಳಿದೆ. ತೆಲಂಗಾಣ, ಕರ್ನಾಟಕ ಮತ್ತು ಸಿಕ್ಕಿಂ ಭಾಗಗಳಲ್ಲಿ ಕಿತ್ತಳೆ ಬಣ್ಣದ ಎಚ್ಚರಿಕೆ ಈಗಾಗಲೇ ಜಾರಿಯಲ್ಲಿದೆ.
ಕೆಂಪು ಬಣ್ಣದ ಎಚ್ಚರಿಕೆಯನ್ನು ನೀಡಲಾದ ಪ್ರದೇಶಗಳಲ್ಲಿ ಜನರು ಶಾಖದ ಕಾಯಿಲೆ ಮತ್ತು ಶಾಖದ ಹೊಡೆತಕ್ಕೆ ಒಳಗಾಗಬಹುದು ಮತ್ತು ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕಿತ್ತಳೆ-ಬಣ್ಣದ ಎಚ್ಚರಿಕೆಯ ಪ್ರದೇಶಗಳಲ್ಲಿ, ದೀರ್ಘಕಾಲದವರೆಗೆ ಸೂರ್ಯನಿಗೆ ಒಡ್ಡಿಕೊಳ್ಳುವ ಅಥವಾ ತೀವ್ರತರವಾದ ಕೆಲಸವನ್ನು ಮಾಡುವವರಿಗೆ ಶಾಖದ ಕಾಯಿಲೆ ಕಾಣಿಸಿಕೊಳ್ಳವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ