ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್ಎಸ್ಎಲ್ಸಿ ಫಲಿತಾಂಶ ಹೊರಬಿದ್ದ ಮೇ 9ರಂದು ಆರೋಪಿ ವಿದ್ಯಾರ್ಥಿನಿ ಮೀನಾ (16) ರುಂಡ ಕತ್ತರಿಸಿ ರುಂಡದ ಸಮೇತ ಪರಾರಿಯಾಗಿದ್ದ. ಆತನ ಸ್ವಗ್ರಾಮ ಹಮ್ಮಿಯಾಲದ ಸಮೀಪದ ಕಾಡಿನಲ್ಲಿ ಅಡಗಿಕೊಂಡಿದ್ದ ಆರೋಪಿ ಪ್ರಕಾಶ (32) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರೋಪಿ ಸೆರೆಯಾದರೂ ಬಾಲಕಿಯ ರುಂಡ ಮಾತ್ರ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.
ಸೂರ್ಲಬ್ಬಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ಮೀನಾ, ಈ ಕುಗ್ರಾಮದಲ್ಲಿ ಈ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಏಕೈಕ ವಿದ್ಯಾರ್ಥಿನಿಯಾಗಿದ್ದಳು. ಮೇ 9ರಂದು ಎಸ್ಎಸ್ಎಲ್ಸಿ ಫಲಿತಾಂಶ ಬಂದಿದ್ದು, ಅವಳು ಪಾಸ್ ಆಗಿದ್ದಳು. ಅದೇ ದಿನ ಆಕೆಯ ಮದುವೆ ನಿಶ್ಚಿತಾರ್ಥ ಕೂಡ ನಡೆಯುತ್ತಿತ್ತು. ಆದರೆ ಈ ಬಗ್ಗೆ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ನಿಶ್ಚಿತಾರ್ಥ ನಿಲ್ಲಿಸಿದ್ದರು.
18 ವರ್ಷ ತುಂಬುವ ವರೆಗೆ ಮೀನಾಳಿಗೆ ಮದುವೆ ಮಾಡುವುದಿಲ್ಲ ಎಂದು ಪೋಷಕರ ಬಳಿ ಮುಚ್ಚಳಿಕೆ ಬರೆಸಿಕೊಂಡಿದ್ದರು. ಈ ವಿಚಾರಣೆ ಜಗಳ ಶುರು ಮಾಡಿದ್ದ ಪ್ರಕಾಶ ಅದೇ ದಿನ ಸಂಜೆ ಮಚ್ಚು ಹಿಡಿದು ಮೀನಾಳ ಮನೆಗೆ ನುಗ್ಗಿ ಮನೆಯವರ ಮೇಲೆ ಹಲ್ಲೆ ನಡೆಸಿ ಮೀನಾಳನ್ನು ಎಳೆದೊಯ್ದು ಆಕೆಯ ರುಂಡ ಕತ್ತರಿಸಿ ನಂತರ ರುಂಡದೊಂದಿಗೆ ಮಾಡಿ ಪರಾರಿಯಾಗಿದ್ದ. ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ