ಘಾಟ್‌ಕೋಪರ್‌ ಹೋರ್ಡಿಂಗ್ ಕುಸಿತ ದುರಂತ : ಉದಯಪುರದಲ್ಲಿ ಜಾಹೀರಾತು ಫಲಕದ ಮಾಲೀಕನ ಬಂಧನ

ಮುಂಬೈ: ಮುಂಬೈನ ಘಾಟ್‌ಕೋಪರ್‌ನಲ್ಲಿ ಕುಸಿದು ಬಿದ್ದ ಜಾಹೀರಾತು ಫಲಕ ಅಳವಡಿಕೆ ಹೊಣೆ ಹೊತ್ತಿದ್ದ ಉದ್ಯಮಿ ಭವೇಶ್ ಭಿಂಡೆ ಅವರನ್ನು ಗುರುವಾರ ರಾತ್ರಿ ರಾಜಸ್ಥಾನದ ಉದಯಪುರದಲ್ಲಿ ಬಂಧಿಸಲಾಗಿದ್ದು, ಇಂದು ಬೆಳಗ್ಗೆ ಮುಂಬೈಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಇಗೋ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ಭವೇಶ್ ಭಿಂಡೆ ಅವರನ್ನು ಮುಂಬೈ ಪೋಲಿಸ್ ಕ್ರೈಂ ಬ್ರಾಂಚ್ ಬಂಧಿಸಿದೆ.
ಸೋಮವಾರ ಸಂಜೆ ಮುಂಬೈನ ಘಾಟ್‌ಕೋಪರ್‌ನಲ್ಲಿ ಜೋರಾದ ಗಾಳಿ ಮತ್ತು ಅಕಾಲಿಕ ಮಳೆಗೆ 120 ಅಡಿ 120 ಅಡಿಯ ಬೃಹತ್‌ ಜಾಹೀರಾತು ಫಲಕವು ಹತ್ತಿರದ ಪೆಟ್ರೋಲ್ ಪಂಪ್‌ಗೆ ಮೇಲೆ ಬಿದ್ದು 16 ಜನರು ಸಾವಿಗೀಡಾಗಿದ್ದರು ಮತ್ತು 75 ಜನರು ಗಾಯಗೊಂಡಿದ್ದರು.. ಘಟನೆಯ ನಂತರ ಭಿಂಡೆ ತನ್ನ ಚಾಲಕನೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದ.

ಭಿಂಡೆಯನ್ನು ಪತ್ತೆಹಚ್ಚಲು ಮುಂಬೈ ಪೊಲೀಸರು ಒಟ್ಟು ಎಂಟು ತಂಡಗಳನ್ನು ವಿವಿಧ ಸ್ಥಳಗಳಿಗೆ ಕಳುಹಿಸಿದ್ದರು. ಹೋರ್ಡಿಂಗ್ ಕುಸಿತದ ಮೂರು ದಿನಗಳ ನಂತರ ಗುರುವಾರ ಸಂಜೆ ಉದಯಪುರದಲ್ಲಿ ಅಂತಿಮವಾಗಿ ಭಿಂಡೆ ಪತ್ತೆಯಾಗಿದ್ದಾನೆ.
ಪೋಲೀಸರ ಪ್ರಕಾರ, ಲೋನಾವಾಲಾಗೆ ಹೋದ ನಂತರ, ಭಿಂಡೆ ಮರುದಿನ ಮುಂಬೈಗೆ ಮರಳಿದ್ದಾನೆ. ಅಲ್ಲಿಂದ ಥಾಣೆಗೆ, ನಂತರ ಅಹಮದಾಬಾದ್ ಗೆ ಹೋಗಿ ಹಲವು ಬಾರಿ ಲೊಕೇಶನ್ ಬದಲಿಸಿದ ಬಳಿಕ ಹೆಸರು ಬದಲಿಸಿಕೊಂಡು ಉದಯಪುರದ ಹೊಟೇಲ್ ನಲ್ಲಿ ತಲೆಮರೆಸಿಕೊಂಡಿದ್ದ.

ಪ್ರಮುಖ ಸುದ್ದಿ :-   ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಅಧಿಕಾರಿಯೊಬ್ಬರು ಖಚಿತಪಡಿಸಿದಂತೆ ಗುರುವಾರ ಬೆಳಿಗ್ಗೆ 10 ಗಂಟೆಗೆ ಕುಸಿದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಸ್ವಾಧೀನದಲ್ಲಿರುವ ಜಮೀನಿನಲ್ಲಿ ಅಕ್ರಮವಾಗಿ ಜಾಹೀರಾತು ಫಲಕವನ್ನು ಅಳವಡಿಸಲಾಗಿತ್ತು.
ಈ ಘಟನೆಯು ಮುಂಬೈನಲ್ಲಿ ಜಾಹೀರಾತು ಸ್ಥಾಪನೆಗಳ ನಿಯಂತ್ರಕ ಮೇಲ್ವಿಚಾರಣೆಯಲ್ಲಿ ತೀವ್ರವಾದ ಲೋಪಗಳನ್ನು ಎತ್ತಿ ತೋರಿಸಿದೆ, ಸುರಕ್ಷತಾ ಮಾನದಂಡಗಳ ಕಟ್ಟುನಿಟ್ಟಾದ ಜಾರಿ ಮಾಡಬೇಕೆಂಬ ಒತ್ತಾಯಗಳು ಕೇಳಿಬಂದಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement