ಪ್ರಜ್ವಲ್‌ ಅಶ್ಲೀಲ ವೀಡಿಯೊ ಪ್ರಕರಣ : ನಿರೀಕ್ಷಣಾ ಜಾಮೀನು ಕೋರಿ ನಾಲ್ವರಿಂದ ಹೈಕೋರ್ಟ್‌ ಗೆ ಅರ್ಜಿ

ಬೆಂಗಳೂರು : ಹಾಸನ ಲೋಕಸಭಾ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೊ ಮತ್ತು ಚಿತ್ರಗಳ ಪೆನ್‌ಡ್ರೈವ್‌ ಮತ್ತು ಸಿ ಡಿ ಹಂಚಿಕೆ ಪ್ರಕರಣದ ನಾಲ್ವರು ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದಾರೆ.
ಆರೋಪಿಗಳಾದ ನವೀನ ಗೌಡ ಅಲಿಯಾಸ್‌ ಎನ್‌.ಆರ್‌. ನವೀನಕುಮಾರ, ಎನ್‌.ಕಾರ್ತಿಕ, ಬಿ ಸಿ ಚೇತನಕುಮಾರ ಮತ್ತು ಎಚ್‌.ವಿ. ಪುಟ್ಟರಾಜು ಅವರು ಸಲ್ಲಿಸಿರುವ ಪ್ರತ್ಯೇಕ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ರಜಾಕಾಲೀನ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ. ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಹಾಸನದ ಸಿಇಎನ್‌ ಠಾಣಾ (ರಾಜ್ಯ ಸರ್ಕಾರ) ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದ ಪೀಠವು ಆಕ್ಷೇಪಣೆ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿದೆ.
ಹಾಸನದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳಿಗೆ ಮೇ 8ರಂದು ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು.

ಪ್ರಕರಣದ ಹಿನ್ನೆಲೆ
ನವೀನ ಗೌಡ ಮತ್ತು ಇತರರು ಪ್ರಜ್ವಲ್‌ ರೇವಣ್ಣ ಇರುವ ಚಿತ್ರ ಮತ್ತು ವೀಡಿಯೊಗಳನ್ನು ತಿರುಚಿ ಅವುಗಳನ್ನು ಪೆನ್‌ಡ್ರೈವ್‌, ಸಿ ಡಿ, ವಾಟ್ಸಾಪ್‌ ಮೂಲಕ ಹಾಸನ ಲೋಕಸಭಾ ವ್ಯಾಪ್ತಿಯ ಜನರಿಗೆ ಹಂಚಿದ್ದಾರೆ ಎಂದು ದೂರಲಾಗಿದೆ. ಏಪ್ರಿಲ್‌ 26ರಂದು ಪ್ರಜ್ವಲ್‌ಗೆ ಮತದಾನ ಮಾಡದಂತೆ ತಡೆಯುವ ಯತ್ನ ನಡೆಸಲಾಗಿದೆ ಎಂದು ಏಪ್ರಿಲ್‌ 23ರಂದು ಜೆಡಿಎಸ್‌-ಬಿಜೆಪಿ ಚುನಾವಣಾ ಏಜೆಂಟ್‌ ಎಂ ಜಿ ಪೂರ್ಣಚಂದ್ರ ತೇಜಸ್ವಿ ಅವರು ಹಾಸನದ ಸೆನ್‌ ಠಾಣೆಯಲ್ಲಿ ದೂರು ನೀಡಿದ್ದರು.ಈ ದೂರು ಆಧರಿಸಿ ಪ್ರತಿವಾದಿಗಳಾದ ನವೀನ ಗೌಡ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್‌ 171­ಜಿ, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67ಎ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement